Saturday, June 28, 2008

ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ

ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.

ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.

ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).

ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ‌ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.

ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.

ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?

ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.

ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.

ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?

Thursday, June 19, 2008

ಸಮಸ್ಯೆ, ಅವಕಾಶ ಹಾಗೂ multiple right answers

ರಾಜಕಾರಣ, ಲಂಚ, ರಾಜಕೀಯ, ಭ್ರಷ್ಟಾಚಾರ ಇವೆಲ್ಲವನ್ನೂ ಬುದ್ಧಿವಂತ ಜನತೆ ಒಂದು ರೀತಿಯ ಅಲರ್ಜಿಯಿಂದ ನೋಡುತ್ತದೆ, ಹೇಸಿಗೆ ಮಾಡಿಕೊಳ್ಳುತ್ತದೆ. ’ಇವೆಲ್ಲ ನಮಗಲ್ಲ’ ಎಂದುಕೊಂಡು ಕೈ ತೊಳೆದುಕೊಳ್ಳಲು ನೋಡುತ್ತದೆ. ನಮ್ಮ ಜೀವನದಲ್ಲಿ ಸಾಂಸ್ಕೃತಿಕವಾಗಿ ಬೆಳವಣಿಗೆಗಳು ಇದ್ದಂತೆ ರಾಜಕೀಯವಾಗಿಯೂ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಹೆಚ್ಚು ಆಲೋಚಿಸಲು ತೊಡಗಿದ್ದು ದೇಶ ಬಿಟ್ಟು ದೇಶಕ್ಕೆ ಬಂದಾಗಲೆ. ಒಂದು ಕಾಲದಲ್ಲಿ ನನ್ನ ಹುಟ್ಟೂರಾದ ಆನವಟ್ಟಿಯ ಗ್ರಾಮಪಂಚಾಯತಿಯನ್ನು ಸೇರಿಕೊಂಡು ಅಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವುದು ಯಾವತ್ತೂ ನನಸಾಗಲೇ ಇಲ್ಲ - ಹಲವಾರು ಕಾರಣಗಳಿಂದಾಗಿ. ಶಾಲಾ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಕೊಂಡು ಹೈ ಸ್ಕೂಲಿನವರೆಗೂ ಅನೇಕ ’ಮಂತ್ರಿ’, ’ನಾಯಕ’ ಪದವಿಗಳನ್ನು ಪಡೆದುಕೊಂಡು ಒಮ್ಮೆ ಹೈ ಸ್ಕೂಲು ಬಿಟ್ಟು ಕಾಲೇಜು ಸೇರಿಕೊಂಡ ಮೇಲೆ ನನ್ನಲ್ಲಿನ ರಾಜಕೀಯ ಉತ್ಸಾಹವೆಲ್ಲ ಸೂಜಿ ಚುಚ್ಚಿದ ಬೆಲೂನಿನ ಗಾಳಿಯಂತೆ ಖಾಲಿಯಾಗಿ ಹೋಯಿತು. ಮುಂದೆ ತಿಳುವಳಿಕೆ ಬೆಳೆದಂತೆಲ್ಲ ಒಂದು ಕ್ಷೇತ್ರದ ರೆಪ್ರೆಸೆಂಟೇಟಿವ್ ಆಗಲು ಏನೇನೆಲ್ಲ ಪೂರಕ ಅಂಶಗಳು ಬೇಕು ಎಂಬುದನ್ನು ಮನಗಂಡ ನಂತರ ಮುಂದೆ ಎಂದೂ ಈ ರಾಜಕೀಯಕ್ಕೆ ಕೈ ಹಾಕಲೇ ಬಾರದು ಎನ್ನುವಲ್ಲಿಯವರೆಗೆ ಬಂದು ನಿಂತಿದೆ.

***
ನಮ್ಮಲ್ಲಿನ ಅಂದರೆ ಭಾರತದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಪ್ರಶ್ನೆಯಿಂದ ಅರ್ಥೈಸಬಹುದು ಅಥವಾ ವೀಕ್ಷಿಸಬಹುದು - Can you take a "No" for an answer?

ನಮ್ಮಲ್ಲಿ ಈಗ ಚಾಲ್ತಿಯಲ್ಲಿರುವ ಯಾವುದೋ ಒಂದು ವ್ಯವಸ್ಥೆ ಅಥವಾ ಪ್ರಾಸೆಸ್ಸನ್ನು ತೆಗೆದುಕೊಂಡು ಅದರ ಬಗ್ಗೆ ಚರ್ಚೆ ಮಾಡಿಕೊಂಡರೆ ಸುಲಭವಾದೀತು. ಉದಾಹರಣೆಗೆ ಯಾವುದೋ ಒಂದು ಕಾಲೇಜಿನ ಅಡ್ಮಿಷನ್ನ್‌ ಗೆ ಈಗಾಗಲೇ ಕೊನೇ ದಿನವಾಗಿ ಹೋಗಿದೆ ಎಂದುಕೊಳ್ಳೋಣ. ನೀವು ನಿಮ್ಮ ವಿದ್ಯಾರ್ಥಿಯನ್ನು ಆ ಕಾಲೇಜಿಗೆ ಸೇರಿಸಲು ಹೋಗುತ್ತೀರಿ. ಅಲ್ಲಿನ ಗುಮಾಸ್ತರು ’ಕ್ಷಮಿಸಿ, ಈಗಾಗಲೇ ಡೆಡ್‌ಲೈನ್ ಮುಗಿದಿದೆ’ ಎನ್ನುತಾರೆ. ಆಗ ನೀವೇನು ಮಾಡುತ್ತೀರಿ? ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಮ್ಮನೇ ಹಿಂತಿರುಗುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ಬೇರೆ ಯಾವುದಾದರೂ ನ್ಯಾಯವಾದ ದಾರಿಗಳಿವೆಯೇ (alternatives) ಎಂದು ಹುಡುಕುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ನಿಮ್ಮ ಶಿಫಾರಸ್ಸಿನಿಂದ ಅಥವಾ ಲಂಚಕೊಡುವ ಮೂಲಕ ಅಥವಾ ಮತ್ತ್ಯಾವುದೋ ’ನ್ಯಾಯವಲ್ಲದ’ ದಾರಿಗಳಿವೆಯೇ ಎಂದು ಹುಡುಕುತ್ತೀರೋ?

ಹೀಗೇ, ನಮ್ಮಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸಂಕಷ್ಟ, ನೋವು, ನಲಿವು, ಅವಕಾಶ (opportunity) ಹಾಗೂ ಸವಾಲುಗಳಿಗೆ ಹಲವಾರು ಉತ್ತರಗಳಿವೆ - there are multiple right answers ಅಂತಾರಲ್ಲ ಹಾಗೆ. ಆದರೆ ಅವುಗಳನ್ನು ನಾವು ನೋಡೋ ದೃಷ್ಟಿಕೋನ ಬದಲಾಗಬೇಕು ಅಷ್ಟೇ.

***

ನಮ್ಮ ರಾಜಕಾರಣಿಗಳು ಅಂದರೆ ಬುದ್ಧಿವಂತ ಜನ ಮೂಗು ಮುರಿಯಬೇಕೇಕೆ? ಅವರು ಹೇಗಿದ್ದರೂ ಹೇಗಾದರೂ ನಮ್ಮ ಪ್ರತಿನಿಧಿಗಳೇ ಅಲ್ಲವೇ? ನಾವು ಎಲ್ಲ ರೀತಿಯಿಂದ ಚೆನ್ನಾಗಿದ್ದು ನಮ್ಮ ಪ್ರತಿನಿಧಿಗಳು ಸರಿಯಾಗಿಲ್ಲವೆಂದರೆ ಅದಾದರೂ ಒಂದು ವಾದವಾದೀತು. ನಮ್ಮ ಸಮಾಜದಲ್ಲಿ ಹಲವು ರೀತಿಯ ಜನರು ಇರೋದು ಸಹಜವಾದಲ್ಲಿ, ಅಂತಹವರನ್ನು ರೆಪ್ರೆಸೆಂಟ್ ಮಾಡುವವರು ಎಲ್ಲರಿಗೂ ಸ್ಪಂದಿಸಬೇಕಾದಲ್ಲಿ ನಮ್ಮ ನಾಯಕರು ಈಗಿರುವುದಕ್ಕಿಂತ ಭಿನ್ನರಾಗಲು ಸಾಧ್ಯವೇ ಇಲ್ಲ. ಯಾರೇ ವಿಧಾನಸೌಧಕ್ಕೋ ಅಥವಾ ಪಾರ್ಲಿಮೆಂಟಿನ ಒಳಗೆ ನುಗ್ಗಿ ಅಲ್ಲಿನ ಈಗಿನ ರಾಜಕಾರಣಿಗಳನ್ನೆಲ್ಲ ನಾಶ ಮಾಡಿದರೂ ಎಂದೇ ಇಟ್ಟುಕೊಳ್ಳಿ, ಆ ಪಾಯಿಂಟಿನಿಂದ ಮುಂದೆ ಬರುವ ಹೊಸ ರಾಜಕಾರಣಿಗಳು ಈಗಿನವರಿಗಿಂತ ಅದೆಷ್ಟು ಭಿನ್ನರಾಗಿರಬಲ್ಲರು ಎನ್ನುವುದು ಪ್ರಶ್ನಾರ್ಥಕ ವಿಚಾರ. ನನ್ನ ಪ್ರಕಾರ ಒಬ್ಬ ಸಾದು-ಸಂತನನ್ನು ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ಕೂರಿಸಿದರೂ ಅವನಿಗೆ ಜನರು ಲಂಚದ ಆಮಿಷ ಒಡ್ಡೇ ಒಡ್ಡುತ್ತಾರೆ. ಜೊತೆಗೆ ತಾಲ್ಲೂಕು ಆಫೀಸು, ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಮಾಡುವವರೂ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ಸದಸ್ಯರು ಎನ್ನುವುದನ್ನು ನಾವು ಹೇಗೆ ತಾನೇ ಮರೆಯಲಾದೀತು?

ನಮ್ಮ ಕಾನೂನು-ಕಟ್ಟಳೆಗಳು ಹಳೆಯದಾಗಿರಬಹುದು, ಇವತ್ತಿಗೂ ನಮ್ಮೂರಿನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಓಬೀರಾಯನ ಕಾಲದ ಮೌಲ್ಯವನ್ನು ತಾಲೂಕು ಆಫೀಸಿನ, ಗ್ರಾಮ ಪಂಚಾಯತಿಯ ರೆಕಾರ್ಡುಗಳಲ್ಲಿ ಬಿಂಬಿಸುತ್ತಿರಬಹುದು. ಇಂದು ನೀವು ಕೊಡುತ್ತಿರುವ ಕಂದಾಯ ಆಯಾ ಪಟ್ಟಣದ ಅಭಿವೃದ್ಧಿಗೆ ಮೀಸಲಾದ ಬಜೆಟ್ಟಿನಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಬಹಳ ಚಿಕ್ಕದಾಗಿ ತೋರಬಹುದು. ನಾವು ಕೊಡುತ್ತಿರುವ ಕಂದಾಯ ಅಷ್ಟೇ ಇರಲಿ, ಆದರೆ ನಮ್ಮೂರಿನ ಅಭಿವೃದ್ಧಿ ಆಗಲಿ ಎಂದರೆ ಹೇಗೆ ಸಾಧ್ಯ? ಸರ್ಕಾರ ಎಲ್ಲದಕ್ಕೂ ದುಡ್ಡು ಕೊಡಲಿ ಅಂದರೆ ಅದು ಯಾರ ಹಣ, ಅದಕ್ಕೆ ಮೂಲ ಆದಾಯ ಎಲ್ಲಿಂದ ಬರಬೇಕು? ಸರಿಯಾಗಿ ತೆರಿಗೆ ಕಟ್ಟುವವರಿಂದ ಹಣ ವಸೂಲಿ ಮಾಡುವ ವ್ಯವಸ್ಥೆ ತೆರಿಗೆ ಕಟ್ಟದೇ ಬದುಕುವ ಅದೆಷ್ಟೋ ಕೋಟಿ ಜನರನ್ನು ಹೇಗೆ ಸಂತೈಸಲು ಸಾಧ್ಯ? ಪ್ರತಿ ಊರಿನ, ಗ್ರಾಮದ, ಪಟ್ಟಣದ, ನಗರದ ಬೆಳವಣಿಗೆಗೆ ತಕ್ಕಂತೆ ಅಲ್ಲಿನ ಬಜೆಟ್ ಬೆಳೆಯುತ್ತಿದೆಯೇ? ಒಂದು ಐಸ್ ಕ್ಯೂಬ್‌ನಂತೆ ಇದ್ದಲ್ಲೇ ಕರಗುವ ಹಣದ ಗಂಟು ಈ ಬೆಳವಣಿಗೆಗಳು ಒಡ್ಡುವ ಸವಾಲುಗಳನ್ನು ಅದೆಷ್ಟರ ಮಟ್ಟಿಗೆ ಎದುರಿಸ ಬಲ್ಲದು?

***

ನಾವು ಅಮೇರಿಕಕ್ಕೆ ಬಂದೆವು, ಬಂದ ದಿನದಿಂದ ಇಲ್ಲಿಯವರೆಗೆ ಕಾನೂನನ್ನು ಪಾಲಿಸಿಕೊಂಡು, ಇದ್ದ ಕಾನೂನು-ಕಟ್ಟಳೆಗಳಿಗೆಲ್ಲ ಸರಿಯಾಗಿ ಹೊಂದಿಕೊಂಡು ಬದುಕುತ್ತಿದ್ದೇವೆ. ಈಗ ನಾವಿರುವ ಟೌನ್‌ಶಿಪ್‌ನವರು ಮೊನ್ನೆ ನಮ್ಮ ಮನೆ ಕಂದಾಯವನ್ನು ಹೆಚ್ಚು ಮಾಡಿದರು, ಅದಕ್ಕೆ ನಾನು ಅಪೀಲು ಮಾಡಿದೆ. ಅದಕ್ಕೆ ತಕ್ಕ ಉತ್ತರದ ಜೊತೆಗೆ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟರು ನಾನು ಬಾಯಿ ಮುಚ್ಚಿಕೊಂಡು ಹಿಂದೆ ಬರದೆ ಬೇರೆ ದಾರಿ ಇರಲಿಲ್ಲ. ಇಲ್ಲಿನ ಸ್ಕೂಲ್ ಬಜೆಟ್‌ನ ಪ್ರಾಸೆಸ್ಸಿನಲ್ಲಾಗಲಿ, ಇಲ್ಲಿ ಆಗಾಗ್ಗೆ ಟೌನ್‌ಶಿಪ್‌ನವರು ತೆರಿಗೆಯನ್ನು ವಿಶ್ಲೇಶಿಸುವ ಬಗೆಯಲ್ಲಾಗಲೀ, ಇಲ್ಲಿನ ಸ್ಥಳೀಯ ಅಭ್ಯರ್ಥಿಗಳ ಚುನಾವಣೆಯಲ್ಲಾಗಲೀ ನಾನು ಯಾವುದೇ ರೀತಿಯ ಕ್ರಿಯಾತ್ಮಕ ಸ್ಪಂದನವನ್ನು ತೋರದವನು ಅದೇಕೋ ನಮ್ಮ ಮನೆಯ ಟ್ಯಾಕ್ಸ್ ಹೆಚ್ಚಳವನ್ನು ಅವರು ಹೆಚ್ಚಿಸಿದ ಮೇಲೆ ನೋಡಿ ನೊಂದಿದ್ದೇ ಬಂತು. ನಾನು ಈ ಸ್ಥಳೀಯ ಪ್ರಾಸೆಸ್ಸುಗಳಲ್ಲಿ ಇನ್‌ವಾಲ್ವ್ ಆಗಲೀ ಬಿಡಲೀ ಅದಕ್ಕೂ ಟ್ಯಾಕ್ಸ್ ಹೆಚ್ಚಳಕ್ಕೂ ನೇರ ಸಂಬಂಧವಿಲ್ಲದಿರಬಹುದು, ಕೊನೇಪಕ್ಷದ ಇಲ್ಲಿನ ನಿರ್ಧಾರಗಳಲ್ಲಿ ನಾನೂ ಭಾಗಿಯಾಗಬಹುದಿತ್ತೇನೋ.

ಇಲ್ಲಿಗೆ ಬಂದಂದಿನಿಂದ ಕೇವಲ ಪ್ರೊಪೆಷನಲ್ ಅಸ್ಥೆಯಿಂದಷ್ಟೇ ಅಮೇರಿಕವನ್ನು ನೋಡಿ ಅದರಲ್ಲಿ ಒಂದಾಗಿರುವ ನಾವು ಉಳಿದ - ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದರೆ, ತೊಡಗಿಸಿಕೊಂಡರೆ...ಎನ್ನುವುದು ಈ ಲೇಖನದ ಆಶಯವಷ್ಟೆ. ’ಅದು ನಮ್ಮದಲ್ಲದ ಸಮಸ್ಯೆ’ ಎಂದು ದೂರ ನಿಂತುಕೊಂಡರೆ ಸಮಸ್ಯೆಗಳೇನೂ ದೂರ ಹೋಗೋದಿಲ್ಲ. ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ದಿನ ಅದೇ ಸಮಸ್ಯೆಯ ಸುಳಿಯಲ್ಲಿ ನೀವೂ ಸಿಕ್ಕಿ ಹಾಕಿಕೊಳ್ಳಬಹುದು, ಒಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಅದಕ್ಕೆ ಪರಿಹಾರ ಕಂಡು ಹಿಡಿಯುವ ನಮ್ಮ ನಿಲುವು ಆ ಸಮಯಕ್ಕೆ ತಕ್ಕಂತೆ ಭಿನ್ನವಾಗಿರಬಹುದು ಅಥವಾ ನಮಗೆ ಏನು ಅನುಕೂಲವೋ ಅದನ್ನು ನಾವು ಸಮರ್ಥಿಸಿಕೊಳ್ಳಬಹುದು. ನಮ್ಮನ್ನು ಅಡರಿಕೊಳ್ಳುವ ಸಮಸ್ಯೆಗಳು ಒಂದೊಂದು ಅವಕಾಶಗಳು ಎಂದುಕೊಂಡು ಆ ಮಟ್ಟಿಗೆ ನಾವು ಏನು ಮಾಡಬಲ್ಲೆವು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನೆಯ ಮುಂದಿನ ಬೀದಿಯಲ್ಲಿ ನಾಯಿಯೊಂದು ಸತ್ತಿದೆ ಎಂದುಕೊಳ್ಳಿ - ಒಂದೆರಡು ದಿನಗಳಲ್ಲಿ ಅದು ಗಬ್ಬು ನಾತ ಹರಡಬಲ್ಲದು, ಅದರಿಂದ ಹರಡುವ ಕ್ರಿಮಿ ಕೀಟಗಳು ರೋಗ ರುಜಿನಗಳನ್ನು ತಂದೊಡ್ಡಬಹುದು. ಇಂತಹ ಒಂದು ಸರಳ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೇನು ಉತ್ತರ ಕಂಡುಕೊಳ್ಳುತ್ತೇವೆ, ಅದಕ್ಕೆ ಒಬ್ಬೊಬ್ಬರ ಟಾಲರೆನ್ಸ್ ಒಂದೊಂದು ರೀತಿ ಇದ್ದು ಕೊನೆಗೆ ಅದು ಪರಿಹಾರಗೊಳ್ಳುವುದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿಕೊಳ್ಳಿ - ಅದೇ ರೀತಿ ನಮಗೆದುರಾಗುವ ಸಮಸ್ಯೆ-ಅವಕಾಶಗಳು ಹಾಗೇ - ಅವುಗಳಿಗೆಲ್ಲ multiple right answers ಇವೆ!

Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

Sunday, June 08, 2008

ಬೆತ್ತಲಾಗದ ಮನಸ್ಸಿನ ಕತ್ತಲೆ

ಹನ್ನೊಂದು ವರ್ಷದ ಹಿಂದೆ ಈ ದೇಶಕ್ಕೆ ಬಂದ ಹೊಸದರಲ್ಲಿ ಇಲ್ಲಿ ಜಿಮ್‍ಗೆ ಸೇರಿಕೊಳ್ಳಬೇಕು, ನಾನೂ ಎಲ್ಲರಂತೆ ಒಂದು ಎಕ್ಸರ್‌ಸೈಸ್ ರುಟೀನ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇ ಬಂತು, ನಮ್ಮ ಮನೆಯ ಹತ್ತಿರದ ಹೆಲ್ತ್ ಕ್ಲಬ್ ಒಂದಕ್ಕೆ ಮೆಂಬರ್ ಆದದ್ದು ಚೆನ್ನಾಗಿ ನೆನಪಿದೆ. ನನ್ನಂತಹವರು ಖುರ್ಚಿ ಮೇಲೆ ಕುಳಿತೇ ದುಡಿದು ತಿನ್ನುವ ಕಾಯಕಕ್ಕೆ ಬದ್ಧರಾದಂತೆ, ಆಗಾಗ್ಗೆ ಹಲವಾರು ದಿಕ್ಕುಗಳಲ್ಲಿ ತಿರುಗಿ ಬಾಗಿ ಬಳಕುವ ಖುರ್ಚಿಯ ಮುಂದಿನ ಜಡ ಚೇತನ ಟೇಬಲ್ಲಿನ ಸಂಗಕ್ಕೆ ಜೋತು ಬಿದ್ದು ನನ್ನ ಹೊಟ್ಟೆ ಕಿಂಚಿತ್ತು ಕಿಂಚಿತ್ತಾಗೇ ಮುಂದೆ ಬರಲು ಆರಂಭಗೊಂಡಿದ್ದು ಅನೇಕ ರೀತಿಯಲ್ಲಿ ನನಗೆ ಸೋಜಿಗವನ್ನುಂಟು ಮಾಡುತ್ತಲೇ ಇದೆ, ಆದರೆ ಪರಿತ್ಯಾಗಿ ಮನಸ್ಸು ಅದೇನೇ ಸಂಕಲ್ಪಗಳನ್ನು ಮಾಡಿಕೊಂಡರೂ ದಿನಕ್ಕೊಮ್ಮೆಯಾದರೂ ಹಲ್ಲು ತಿಕ್ಕುವ ಕಾಯಕದಂತೆ ಇಂದಿಗೂ ಮೈ ಮುರಿದು ವ್ಯಾಯಾಮ ಮಾಡುತ್ತಿಲ್ಲವಲ್ಲ ಎನ್ನುವುದು ನನ್ನ ಲಾಂಗ್‌ಟರ್ಮ್ ಕೊರಗುಗಳಲ್ಲೊಂದು. ದಶಕದ ಹಿಂದೆ ಒಂದಿಷ್ಟು ದಿನ ನೆಪಕ್ಕೆಂದು ಹೆಲ್ತ್‌ಕ್ಲಬ್‌ಗೆ ಹೋದಂತೆ ಮಾಡಿ ಕೊನೆಗೆ ಇವತ್ತಿನವರೆಗೂ ಮತ್ತೆ ಅಂತಹ ಸ್ಥಳಗಳಿಗೆ ಕಾಲಿಕ್ಕದ ಭೂಪ ನಾನು ಎಂದು ನನ್ನನ್ನು ನಾನೇ ಹೀಯಾಳಿಸಿಕೊಂಡು ನಗುವ ಪ್ರಸಂಗವೊಂದು ನೆನಪಿಗೆ ಬಂತು.

ಅವತ್ತೇ ಮೊದಲು ನಾನು ಇಲ್ಲಿನ ಹೆಲ್ತ್‌ಕ್ಲಬ್‌ನ ಶೌಚಾಲಯಗಳಿಗೆ ಭೇಟಿ ನೀಡಿದ್ದು. ನಾನು ಅಲ್ಲಿನ ಥರಾವರಿ ಉಪಕರಣಗಳನ್ನು, ಮಷೀನುಗಳನ್ನು ಬಳಸಿ ಏನು ಬೇಕಾದರೂ ಮಾಡಿ ಧಾರಾಳವಾಗಿ ಬೆವರಿಸಿಕೊಂಡು ಅಲ್ಲಿನ ಶೌಚಾಲಯ ದಾರಿ ಹಿಡಿದು ಅಲ್ಲಿ ನೋಡಿದರೆ ಅಲ್ಲಿ ಬೇಕಾದಷ್ಟು ಜನ ತಮ್ಮ ಹುಟ್ಟುಡುಗೆಲ್ಲಿರುವುದೇ? ಅಂದರೆ ಬರೀ ಬೆತ್ತಲಾಗಿ ನಿಂತುಕೊಂಡು ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿರುವುದೇ? ಇದು ಮುಂದುವರೆದ ದೇಶ, ಇಲ್ಲಿನ ಜನರಿಗೆ ತಮ್ಮ ಮಾನ-ಮರ್ಯಾದೆ, ನಾಚಿಕೆ-ಸಂಕೋಚಗಳು ಒಂದೂ ಅಡ್ಡಿ ಬಾರವೇ? ಎನ್ನಿಸಿ ಶಾಕ್ ಹೊಡೆದದ್ದು ನಿಜ. ಅಂದಿನಿಂದ ನಾನು ಮತ್ತೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಮನಸ್ಸು ಮಾಡಿಲ್ಲ.

ಹೌದು, ನಮ್ಮ ಬೆಳವಣಿಗೆಯೇ ಹಾಗಿದೆ, ಹಾಗಿತ್ತು. ಶಾಲಾ ದಿನಗಳಲ್ಲಿ ನಮ್ಮೂರಿನ ಹಳ್ಳಿ ಬಯಲಿನಲ್ಲಿ ಕೊ ಎಜುಕೇಶನ್‌ ಇದ್ದ ಕಾರಣ ನಾವೆಲ್ಲರೂ ಮಧ್ಯಂತರ ವಿರಾಮ ಕಾಲದಲ್ಲಿ ಸಾಲಿನಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಿದ್ದೇ ನಮ್ಮಲ್ಲಿನ ಇಂಟಿಮಸಿ. ಅದನ್ನು ಬಿಟ್ಟರೆ ಬತ್ತಲಾಗುವುದೆಂದರೆ ಶಾಪ, ಅದೂ ತನ್ನ ಸಹಪಾಠಿಗಳೆದುರು, ಸಹೋದರ-ಸಹೋದರಿಯರ ಎದುರು, ಊಹ್ಞೂ ಸಾಧ್ಯವಿಲ್ಲದ ಮಾತು. ಹಾಗಿದ್ದ ಮೇಲೆ, ಇನ್ನು ಸ್ಟ್ರೇಂಜರ್ಸ್ ಎದುರು ಬತ್ತಲಾಗುವುದಕ್ಕೆ ಸಂಕೋಚವೇಕೆ ಎಂದು ಪ್ರಶ್ನೆ ಎದ್ದಿದ್ದೂ ಸಹಜ. ಆದರೆ, ಸಾರ್ವಜನಿಕವಾಗಿ ಬತ್ತಲಾಗುವುದು ಖಂಡಿತವಾಗಿ ಸಲ್ಲದ ನಡವಳಿಕೆ, ಅದು ನನ್ನ ಕಲ್ಪನೆಯಲ್ಲಂತೂ ಈವರೆಗೆ ಬಂದೇ ಇಲ್ಲ ಎನ್ನಬಹುದು.

ಸೆಪ್ಟೆಂಬರ್ ಹನ್ನೊಂದರ ನಂತರ ಬಿಗಿಯಾದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಕೋಮಿನವರನು ಬೆತ್ತಲೆ ಸರ್ಚ್ ಮಾಡುವುದರ ಬಗ್ಗೆ ಕೇಳಿದ್ದೇನೆ. ತಮ್ಮ ಬಗಲಿನ ಚೀಲದಲ್ಲಿರುವ ಕುರ್ ಆನ್ ಪುಸ್ತಕವನ್ನು ಪೋಲೀಸ್ ನಾಯಿಗಳು ಮೂಸುವುದನ್ನು ತಪ್ಪು ಎಂದುಕೊಂಡ ಮನಸ್ಥಿತಿಗಳ ಬಗ್ಗೆ ಕೇಳಿದ್ದೇನೆ. ನನ್ನ ಹಾಗೆ ನನ್ನ ಹಿನ್ನೆಲೆಯಲ್ಲಿಂದ ಬಂದಿರುವವರು ಸಾರ್ವಜನಿಕವಾಗಿ ಬೆತ್ತಲಾಗದಿರುವುದನ್ನು ಅನೋಮೋದಿಸುವುದನ್ನು ನೋಡಿದ್ದೇನೆ. ಹೀಗಿರುವಲ್ಲಿ ನಾವಿರುವ ಪರಿಸರ ಹೊಸದಾದರೂ, ಏಕ್ ದಂ ನಮಗೆಲ್ಲ ಇಲ್ಲಿನ ರೀತಿ-ರಿವಾಜುಗಳಿಗೆ ಹೊಂದಿಕೊಳ್ಳಿ ಎನ್ನುವುದು ಹೇಳಲು ಮಾತ್ರ ಚೆಂದ, ಆಚರಿಸಲು ಅಷ್ಟೇ ಕಷ್ಟ ಎನ್ನುವುದಕ್ಕೆ ನನ್ನದೇ ಉದಾಹರಣೆ ತೆಗೆದುಕೊಳ್ಳಿ - ಇಂದಿಗೂ ಸಾರ್ವಜನಿಕವಾಗಿ ಬತ್ತಲಾಗುವುದನ್ನು ಮನಸ್ಸು ಒಪ್ಪದು.

***

ಆಫೀಸಿನಲ್ಲಿ ನನ್ನ ಸಮವಯಸ್ಕ, ಈಗಾಗಲೇ ಅಮೇರಿಕದ ಸಿಟಿಜನ್‌ಶಿಪ್ ಪಡೆದುಕೊಂಡು ನಮ್ಮ ಆಫೀಸಿನ ವ್ಯಾಪ್ತಿಯಲ್ಲೆ ಇರುವ ಫಿಟ್‌ನೆಸ್ ಸೆಂಟರ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಟ್ಟು ಮಸ್ತಾಗಿರುವ ಪರಾಗ್ ನನ್ನನ್ನು ಒತ್ತಾಯ ಮಾಡಿ ಸುಮ್ಮನೆ ವಿಸಿಟ್‌ಗೆಂದು ಫಿಟ್‌ನೆಸ್ ಸೆಂಟರ್‌ ಅನ್ನು ನೋಡಲು ಕಳೆದ ವಾರ ಕರೆದುಕೊಂಡು ಹೋದ. ಮತ್ತೆ ಅದೇ - ಮಟ ಮಟ ಮಧ್ಯಾಹ್ನ ಮೈ ಬಗ್ಗಿಸಿ ವ್ಯಾಯಾಮ ಮಾಡಿದ ಪ್ರಯುಕ್ತ ಅನೇಕರು ಸ್ನಾನದ ಕೋಣೆಗಳಿಂದ ಬೆತ್ತಲೆ ಓಡಾಡಿಕೊಂಡಿದ್ದರು ತಮ್ಮ ಸುತ್ತು ಮುತ್ತಲೂ ಏನೂ ಯಾರೂ ಇಲ್ಲವೇ ಇಲ್ಲ ಎನ್ನೋ ಹಾಗೆ. ನನಗಂತೂ ಒಂದು ರೀತಿಯ ಅಸಮಧಾನ, ಕಸಿವಿಸಿ - ಅದೇನೋ ಹೇಳಿಕೊಳ್ಳಲಾಗದ ಕಷ್ಟ... ’ನಿನಗೂ ಇವತ್ತಲ್ಲ ನಾಳೆ ರೂಢಿಯಾಗುತ್ತೆ!’ ಎನ್ನುವ ಪರಾಗ್‌ನ ಧ್ವನಿಗೆ ನನ್ನನ್ನು ಸಮಾಧಾನ ಮಾಡಲಾಗಲಿಲ್ಲ. ನಾನೋ ಇನ್ನೆಂದೂ ಇಲ್ಲಿ ಕಾಲಿಡಬಾರದು ಎಂದುಕೊಳ್ಳುತ್ತಲೇ ಅಲ್ಲಿಂದ ಕಂಬಿಕಿತ್ತೆ.

ಸಾರ್ವಜನಿಕವಾಗಿ ಬೆತ್ತಲಾಗದ, ಸಾರ್ವಜನಿಕವಾಗಿ ಬೆತ್ತಲನ್ನು ನೋಡದ ಕತ್ತಲ ಮನಸ್ಥಿತಿಗೆ ಒಂದಿಷ್ಟು ಬೆಳಕು ಚೆಲ್ಲೋಣ: ನನ್ನ ಮನಸ್ಸಿನಲ್ಲಾಗಲೀ, ನನ್ನ ಹಾಗೆ ಆಲೋಚಿಸುವವರ ಮನಸ್ಸಿನಲ್ಲೇನಿದೆ? ನಾವು ಏಕೆ ಈ ರೀತಿ ಆಲೋಚಿಸುತ್ತೇವೆ. ಅದರ ಹಿನ್ನೆಲೆ ಏನು? ಸಭ್ಯತೆ, ಸಂಸ್ಕೃತಿಗಳ ಚೌಕಟ್ಟಿನಲ್ಲಾಗಲೀ, ಅಥವಾ ನಾವು ಬೆಳೆದು ಬಂದ ರೀತಿಯನ್ನು ಶೋಧಿಸಿ ನೋಡಿದರೆ ಈ ರೀತಿಯ ಮನಸ್ಥಿತಿಗೆ ತಕ್ಕ ಉತ್ತರ ಸಿಗುತ್ತದೆ.

ನೀನು ಹಾಲು ಕುಡಿದು ಮಲಗದೇ ಇದ್ದರೆ ಗುಮ್ಮನನ್ನು ಕರೆಯುತ್ತೇನೆ ಎಂದು ಹೆದರಿಸುವ ಅಮ್ಮನ ಧ್ವನಿಯಿಂದ ನಮ್ಮ ನೆರೆಹೊರೆಯಲ್ಲಿನ ಕತ್ತಲು-ಬೆಳಕುಗಳ ಮೇಲೆ ನಮ್ಮ ಅವಲಂಭನೆ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ’ಶೇಮ್-ಶೇಮ್, ಸ್ವಲ್ಪವೂ ಇವನಿಗೆ ಸ್ವಲ್ಪ ನಾಚಿಕೆ-ಮಾನ-ಮರ್ಯಾದೆ ಅನ್ನೋದೇ ಇಲ್ಲ, ಎಲ್ಲರ ಎದುರಿಗೆ ಹೀಗೆ ಬೆತ್ತಲೆ ಬಂದಿದ್ದಾನೆ!’ ಎನ್ನುವ ಮಾತುಗಳು ಮುಗ್ಧ ಮನಸ್ಸಿನ ಮೇಲೆ ಅವುಗಳ ಪ್ರಭಾವವನ್ನು ಮಾಡುತ್ತವೆ. ಬಸ್‌ಸ್ಟ್ಯಾಂಡಿನ ಆವರಣಗಳಲ್ಲಿ ಸಿಗುವ ಅರೆಬೆತ್ತಲೆ ಭಿಕ್ಷುಕರೂ, ಅಲ್ಲಲ್ಲಿ ಹುಚ್ಚು ಹಿಡಿದು ಅಲೆಯುವ ಬೆತ್ತಲೆ ಹುಚ್ಚರೂ ನೆನಪಾಗಿ ಒಂದು ಹೀನ ಸ್ಥಿತಿಗೆ ತಳಪಾಯವಾಗುತ್ತಾರೆ. ಇನ್ನು ನಮ್ಮ ಭಾರತೀಯ ನೆಲೆಯಲ್ಲಿ ಬೆತ್ತಲೆ ಇರುವವರೆಂದರೆ ಯಾರು? ಆದಿವಾಸಿಗಳು, ಕಾಡಿನಲ್ಲಿ ಬದುಕುವವರು, ಮೊದಲಾದ ವಿಭಿನ್ನ ಸಂಸ್ಕೃತಿಯ ಜನರು. ಈ ಮನಸ್ಸಿನ ಮೂಲದ ನಾವುಗಳು ಹತ್ತು-ಹದಿನೈದು ವರ್ಷಗಳ ಹಿಂದೆ ಆಧುನಿಕ ಫಿಟ್‌ನೆಸ್ ಸೆಂಟರ್‍ಗೆ ಬೆಂಗಳೂರು-ಮದ್ರಾಸ್ ವಾತಾವರಣದಲ್ಲಿ ಹೋಗಿದ್ದೂ ಇಲ್ಲ, ಅಲ್ಲೂ ಇಂದು ಪರಿಸ್ಥಿತಿ ಬದಲಾಗಿದೆ ಎಂದು ಹೇಳುವ ಪರಾಗ್‌ನ ಮಾತುಗಳು ನಂಬಲೂ ಕಷ್ಟವಾಗುತ್ತಿರುವುದಕ್ಕೆ ಸಾಕಲ್ಲವೇ ಇಷ್ಟು ಕಾರಣಗಳು?

***

ಬೆತ್ತಲಾಗದ ನಮ್ಮ ಮನಸ್ಸಿನ ಹಿಂದಿನ ಕಾರಣಗಳೇನು? ನಾವೂ ಈ ರೀತಿ ಇಲ್ಲಿನವರಂತೆ ಬದಲಾಗಬೇಕೇ? ಎಲ್ಲರೊಳಗೊಂದಾಗದ ಮನಸ್ಸಿನಲ್ಲೇ ಮಂಡಿಗೆ ತಿಂದುಕೊಂಡು ನಮ್ಮ ಪ್ರಪಂಚದ ಖುರ್ಚಿ ಮೇಜಿಗೆ ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿಕೊಂಡು ಜೊತೆಗೆ ದಿನೇದಿನೇ ಬೊಜ್ಜನ್ನು ಹೆಚ್ಚಿಸಿಕೊಳ್ಳುವ ಬತ್ತಲಾಗದ ನಮ್ಮ ಮನಸ್ಸಿನ ಕತ್ತಲೆಗೆ ಕನ್ನಡಿ ಹಿಡಿಯುವವರಾರು? ಅಥವಾ ಇಲ್ಲಿಗೆ ಬಂದು ನಮ್ಮ ತನವೆಲ್ಲ ದಿನೇದಿನೇ ಕಳೆದುಕೊಂಡು ಹೋಗುತ್ತಿರುವ ಹಾಗೆ ಇದೂ ಒಂದು ಬಿಹೇವಿಯರ್ ಅನ್ನು ಬದಲಾಯಿಸಿಕೊಳ್ಳದೇ ಹಾಗೇ ಇದ್ದರೆ ಏನಾದೀತು?

Monday, June 02, 2008

...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?

ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.

ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.

ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).

ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!

ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.

***

ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!

ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.

ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.

ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!