Sunday, July 29, 2007

ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ...

ಸಾಯಂಕಾಲ ನಮ್ಮ ಟೌನ್‌ಶಿಪ್ಪ್‌ನಲ್ಲ್ ನಡೆಯೋ ವರ್ಷಾವಧಿ ಕಾರ್ನಿವಲ್ಲ್‌ಗೆ ಕರಕೊಂಡ್ ಹೋಗ್ತೀನಿ ಅಂತ ಬೆಳಿಗ್ಗೆ ಹೊರಡ್ ಬೇಕಾದ್ರೆ ನೆನಪಿಸಿದ್ದೂ ಅಲ್ದೇ ಮಧ್ಯಾಹ್ನ ಫೋನ್ ಮಾಡಿ ಹೇಳಿದ್ದರಿಂದ ಸುಬ್ಬ ರೆಡಿ ಆಗಿ ಕೂತಿರ್ತಾನೆ, ಒಂದು ಕಾಫೀನೋ ತಿಂಡೀನೋ ಮಾಡಿಕೊಂಡು ಎಂದು ಆಲೋಚಿಸಿಕೊಂಡು ಬಂದ ನನಗೆ ಸೋಫಾದ ಮೇಲೆ ಕುಳಿತ ಸುಬ್ಬನನ್ನು ನೋಡಿ ಸಂಪತ್ತಿಗೆ ಸವಾಲಿನ ವಜ್ರಮುನಿಯ ನೆನಪಾಯಿತು.

'ಲೋ, ರೆಡೀನಾ, ಅಲ್ಲಿ ಪಾರ್ಕಿಂಗ್ ಸಿಗೋದಿಲ್ಲ ಜಲ್ದೀ ಹೋಗ್ಬೇಕು - ನಾನು ಎದ್ನೋ ಬಿದ್ನೋ ಅಂತ ಬಂದ್ರೆ ಇನ್ನೂ ಹಾಳ್ ಮುಖಕ್ಕೆ ನೀರೂ ತೋರಿಸ್ದೇ ಕುತಗಂಡ್ ಇದ್ದೀಯಲ್ಲೋ?' ಎಂದು ಕಿಚಾಯಿಸಿದೆ, ನನ್ ಮಾತಿಗೆ ಉತ್ರ ಕೊಡೋ ಹಾಗೆ ಬಾಯಿ ತೆರದವನು 'ಅದ್ಯಾವ್ ಸೀಮೇ ಡಬ್ಬಾ ಇಸ್ತ್ರೀ ಪೆಟ್ಟಿಗೆ ಇಟ್ಟ್ಕೊಂಡಿದ್ದೀಯೋ...' ಒಮ್ಮೆ ಉಗುಳು ನುಂಗಿ, 'ನನ್ ಜೀನ್ಸ್ ಪ್ಯಾಂಟ್ ಮೇಲೆ ಇಡತಿದ್ದ ಹಾಗೇನೇ ಸುಟ್ಟು ಹೋಯ್ತು' ಎಂದು ಸಮಜಾಯಿಷಿ ಕೊಡಲು ನೋಡಿದನೋ ಆಗಲೇ ನನಗೆ ತಿಳಿದದ್ದು ಏನೋ ಎಡವಟ್ಟು ಆಗಿರಲೇ ಬೇಕು ಎಂದು.

'ನಿಜವಾಗೀ? ಸುಟ್ಟೇ ಹೋಯ್ತಾ...ಎಷ್ಟೋ ವರ್ಷದಿಂದ ಇಟ್ಟ್‌ಕೊಂಡಿದ್ದನಲ್ಲೋ...' ಎಂದು ನಾನು ಸುಟ್ಟು ಹೋದ ಐರನ್ ಬಾಕ್ಸ್ ಗತಿ ಕಂಡು ಮರುಕ ಪಡುತ್ತಿದ್ದರೆ, ಹಲ್ಲಿ ಮೇಲೆ ಆಕ್ರಮಣ ಮಾಡಿ ಬಾಲದ ತುಂಡಿನ ಜೊತೆ ಆಟವಾಡ್ತಾ ಇರೋ ಬೆಕ್ಕಿನ ಮರಿಯಂತೆ ಇವನ ಮುಖದ ಮೇಲೆ ಮಂದ ಹಾಸ ಸುಳಿಯತೊಡಗಿತು.

'ಅದ್ಕೇ ಅನ್ನೋದು ಅಮೇರಿಕದ ಪ್ರಾಡಕ್ಟ್‌ಗಳೆಲ್ಲಾ ಸರಿ ಇಲ್ಲಾ ಅನ್ನೋದು...'

'ಆಞ್, ನಿನಗೇನು ತಲೆಗಿಲೆ ಕೆಟ್ಟಿದಿಯೇನು?'

'ಮತ್ತೇನು, ಒಂದು ಇಪ್ಪತ್ ಡಾಲರ್ ಬಿಸಾಕಿ ನಿನ್ನಂಥಾ ಜುಜುಬಿ ನನ್ ಮಕ್ಳು ಇಸ್ತ್ರೀ ಪೆಟ್ಗೇ ತಗಂಡು ಅದನ್ನ ವರ್ಷಗಳ ಮಟ್ಟಿಗೆ ಬಳಸಿ ಬಾಳುಸ್ತಾ ಕುತಗಂಬಿಟ್ರೆ?' ಎಂದು ಅವನದ್ದೇ ಒಂದು ಭಾಷೆ, ತಾರ್ಕಿಕತೆಯಲ್ಲಿ ಸವಾಲನ್ನೊಡ್ಡಿದ, ನನ್ನ ಪರಿಸ್ಥಿತಿ ಮುಕ್ಕಾಲು ಘಂಟೇಯಿಂದ ಸಿಟಿಬಸ್ಸು ಕಾದು ಕುಳಿತ ಮಾರವಾಡಿ ಹುಡುಗ ಕೊನೆಗೂ ಬಂದ ಬಸ್ಸಿನ ಕನ್ನಡ ಅಂಕೆಗಳನ್ನು ಓದೋಕೆ ತಡವರಿಸೋರ ಥರ ಆಗಿತ್ತು.

'ಒಂದ್ ಸಾಮಾನ್ ತಗೊಂಡ್ರೆ ಅದು ಬಾಳಾ ದಿನಗಳವರೆಗೆ ಬಾಳಕೆ ಬರಲೀ ಅನ್ನೋದು ಲೋಕರೂಢಿ, ನಿನ್ನ ತಲೆ ಒಳಗೆ ಇನ್ನೇನಾದ್ರೂ ಇದ್ರೆ ಅದನ್ನು ದಯವಿಟ್ಟು ಬಿಡಿಸಿ ಹೇಳುವಂತವನಾಗು' ಎಂದೆ ನಾಟಕೀಯವಾಗಿ, ಅಲ್ಲಿ ನೋಡಿದ್ರೆ ಆಫೀಸ್ನಲ್ಲಿ ತಲೆ ತಿಂತಾರೆ, ಇಲ್ಲಿ ನೋಡಿದ್ರೆ ಇವನ್ದು ಬೇರೆ ಕೇಡಿಗೆ...ಎಂದು ಸ್ವಗತದಲ್ಲಿ ಹೇಳಿಕೊಳ್ಳುವವನಂತೆ.

'ನಿನಗೆ ಇಂಥವನ್ನೆಲ್ಲ ನನ್ನಂಥೋರ್ ಹೇಳ್ಕೊಡಬೇಕಾ? ನೋಡು, ನಮ್ ದೇಶದಲ್ಲಿ ಒಂದ್ ಸಾಮಾನ್ ತಗೊಂಡ್ರೆ, ಉದಾಹರಣೆಗೆ ಇಸ್ತ್ರೀ ಪೆಟ್ಗೇ ಅಂತಾನೇ ಇಟ್ಕೋ, ಅದು ವರ್ಷಕ್ಕೊಂದ್ ಸಾರೀನಾದ್ರೂ ಸುಟ್ಟ್ ಹೋಗುತ್ತೆ, ಅದರಿಂದ ದೇಶಕ್ಕೆ ಒಳ್ಳೇದೇ ಅಲ್ವೇ? ಯಾಕೇ ಅಂದ್ರೆ, ಹೀಗೆ ತಗೊಂಡ್ ಸಾಮಾನುಗಳು ಸುಟ್ಟು ಹೋಗೋದ್ರಿಂದ ಉತ್ಪತ್ತಿ ಹೆಚ್ಚುತ್ತೆ, ಅದರ ಪಾರ್ಟ್ಸು, ಸ್ಪೇರೂ ಅಂತ ಇನ್ನೊಂದಿಷ್ಟು ಬಿಸಿನೆಸ್ಸ್ ಬೆಳೆಯುತ್ತೆ, ಸರ್ವೀಸ್ ಸೆಂಟರುಗಳು ಹೆಚ್ಚುತ್ತೆ, ನಾಲ್ಕು ಜನಕ್ಕೆ ಕೆಲ್ಸಾ ಸಿಗುತ್ತೆ...ಅದನ್ನು ಬಿಟ್ಟು ಇಲ್ಲೀ ಥರ ಒಂದ್ಸರ್ತಿ ತಗೊಂಡ್ ಸಾಮಾನು ಹತ್ತು ವರ್ಷಾ ಬಂತು ಅಂತಂದ್ರೆ ಆ ಕಂಪನಿ ಬೆಳೆಯೋದ್ ಹೇಗೆ?' ಎಂದು ದೊಡ್ಡ ಸಾಮ್ರಾಜ್ಯವನ್ನು ಜಯಿಸಿದ ಸಾಮ್ರಾಟನ ನಗೆ ನಕ್ಕ.

'ಓಹೋ, ಹೀಗೋ...ವರ್ಷಾ ವರ್ಷಾ ತಗೊಂಡಿದ್ನೇ ತಗೊಳಕ್ಕೆ ದುಡ್ಡ್ ಯಾವಾನ್ ಕೊಡ್ತಾನೆ?' ನನ್ನ ಕುಹಕದ ಪ್ರಶ್ನೆ.

'ಅದೋ, ಬಾಳಾ ಸುಲ್ಬಾ, ಅಗತ್ಯ ವಸ್ತುವಿನ್ ಮೇಲೆ ಜನ ಖರ್ಚ್ ಮಾಡೋದ್ರಿಂದ ಅವರಲ್ಲಿರೋ ದುಡ್ಡ್ ಕಡಿಮೆಯಾಗಿ, ಕೆಟ್ಟ್ ಚಟಾ ಯಾವ್ದೂ ಬೆಳಸ್ಕೊಳ್ಳಿಕ್ಕೆ ಆಸ್ಪದಾನೇ ಇಲ್ಲಾ ನೋಡು!'

'ನೀನೋ ನಿನ್ ಲಾಜಿಕ್ಕೋ...ಒಂದ್ ಕೆಲ್ಸಾ ಮಾಡು, ಇಲ್ಲಿರೋ ಸಾಮಾನ್‌ಗಳನ್ನೆಲ್ಲಾ ಒಂದು ಸುತ್ಗೆ ತಗೊಂಡು ಕುಟಕೋಂತ ಬಾ...ಇಷ್ಟು ದಿನಾ ಚೆನ್ನಾಗ್ ಕೆಲ್ಸಾ ಮಾಡಿರೋ ಐರನ್ ಬಾಕ್ಸು ನೀನ್ ಕೈ ಹಾಕಿದ್ ಕೂಡ್ಲೇ ಕೈ ಕೊಡ್ತು ನೋಡು...ಏನು ಕೆಟ್ಟ ಕೈ ನೋಡು ನಿನ್ದು...ಅಲ್ಲಾದ್ರೆ ವೋಲ್ಟೇಜ್ ಏರುಪೇರು ಅಂತಾನಾದ್ರೂ ಅಂದು ಇನ್ನೊಬ್ರ ಕಡೇ ಬೆಟ್ಟ್ ಮಾಡಿ ತೋರಿಸ್‌ಬೋದಿತ್ತು, ಇಲ್ಲಿ ಬೇರೆ ಯಾರ್ದೂ ತಪ್ಪಿಲ್ಲ, ನಿನ್ದೇ, ಯೂಸರ್ ಎರರ್' ಎಂದಕೂಡ್ಲೇ ಶತಕವಂಚಿತ ತೆಂಡೂಲ್ಕರ್ ಪೆವಿಲಿಯನ್ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿರುವಾಗ ಮಾಡಿಕೊಂಡ ಮುಖದ ಹಾಗೆ ಸುಬ್ಬನ ಮುಖದಲ್ಲಿನ ನಗು ಮಾಯವಾಗಿ ಅದರ ಬದಲಿಗೆ ಒಂದು ಗಡಿಗೆಯ ಮುಖಕ್ಕೆ ಕಣ್ಣು, ಮೂಗು, ಕಿವಿ ಬರೆದು ಬೋರಲಾಗಿ ಹಾಕಿದ ಹಾಗೆ ಕಾಣತೊಡಗಿತು.

'ಈಗ ಯಾವನ್ದಾರ್ರೂ ತಪ್ಪಿರ್ಲಿ, ನನ್ನ್ ಪ್ಯಾಂಟು ಅರ್ಧ ಇಸ್ತ್ರೀ ಆಗಿರೋದ್ರಿಂದ ನಾನು ಜೀನ್ಸ್‌ನ ಹಂಗೇ ಹಾಕ್ಕೊಂಡು ಬರ್ತೀನಿ, ದಾರಿಯಲ್ಲಿ ಯಾವನಾದ್ರೂ ಪರಿಚಯ ಮಾಡ್ಸಿ, ಬರೀ ಪ್ಯಾಂಟಿನ ಒಂದೇ ಕಾಲನ್ನು ಇಸ್ತ್ರೀ ಮಾಡಿ ಹಾಕ್ಕೊಳೋದೇ ಇವನ ಅಭ್ಯಾಸ ಅಂತ ಮತ್ತೆಲ್ಲಾದ್ರೂ ಅಪಹಾಸ್ಯ ಮಾಡಿದ್ರೆ ನೋಡ್ಕೋ ಮತ್ತೆ' ಎಂದು ಅಡ್ವಾನ್ಸ್ ವಾರ್ನಿಂಗ್ ಕೊಟ್ಟ. ಬಚ್ಚಲುಮನೆಯ ಕಡೆಗೆ ಮುಖ ತೊಳೆಯಲು ಹೋಗುತ್ತೇನೆ ಎಂದು ಸನ್ನೆ ಮಾಡಿ ಹೋಗುತ್ತಿರುವಾಗ - 'ಹೊಸ ಇಸ್ತ್ರೀ ಪೆಟ್ಗೇ ತರಬೇಕಾದ್ರೆ ಎರಡನ್ನ್ ತರೋದ್ ಮರೀಬೇಡಾ, ನಾನೂ ಒಂದ್ ತಗೊಂಡ್ ಹೋಗ್ತೀನಿ, ವೋಲ್ಟೇಜ್ ನೋಡ್ಕೊಂಡ್ ತರಬೇಕಷ್ಟೇ...' ಎಂದು ಹೊಸ ಬೇಡಿಕೆಯೊಂದನ್ನು ಮಂಡಿಸಿದ.

ಕಾರ್ನಿವಲ್‌ಗೆ ಹೋದಾಗ ಅದಾಗಲೇ ಬಹಳಷ್ಟು ಜನರು ಬಂದಿದ್ದರಿಂದ ಎಲ್ಲಿ ಬೇಕೋ ಅಲ್ಲಿ ಪಾರ್ಕಿಂಗ್ ಸಿಗದಿದ್ದುದರಿಂದ ದೂರದಲ್ಲಿ ಪಾರ್ಕ್ ಮಾಡಿ ಸ್ವಲ್ಪ ನಿಧಾನವಾಗಿ ಜಾತ್ರೆಗೆ ಬರುವಂತಾಯಿತು. ಅಲ್ಲಲ್ಲಿ ಇನ್ನೂ ಚುಮುಚುಮು ಬೆಳಕಿನಿಂದಲೂ ಹುಣ್ಣಿಮೆಯ ನಂತರದ ದಿನವಾದ್ದರಿಂದ ತಿಳಿಮುಗಿಲಲ್ಲಿ ಅದೀಗ ತಾನೇ ಊಟಮಾಡಿ ತೊಳೆದಿಟ್ಟ ಸ್ಟೀಲ್ ತಟ್ಟೆಯಂತೆ ಹೊಳೆಯುತ್ತಿದ್ದ ಚಂದ್ರನಿಂದಲೂ ಜಾತ್ರೆಗೆ ಮತ್ತಷ್ಟು ಮೆರುಗುಬಂದಿತ್ತು. ಅದು ಆಡ್ತೀಯಾ, ಇದು ಆಡ್ತೀಯಾ ಎಂದು ಏನೇನೆಲ್ಲವನ್ನು ತೋರಿಸಿದರೂ ಸುಬ್ಬ ಯಾವುದರಲ್ಲೂ ಆಸಕ್ತಿಯನ್ನು ತೋರಿಸುವವನಂತೆ ಕಂಡುಬರಲಿಲ್ಲ. ಕಾಟನ್ ಕ್ಯಾಂಡಿ ತರತೀನಿ ತಡಿ ಎಂದು ಹೋದವನು ಭಾಳಾ ಜನ ಇದಾರೆ ಲೈನ್‌ನಲ್ಲಿ ಎಂದು ಬರಿ ಕೈಲಿ ಹಿಂತಿರುಗಿ ಬಂದಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಇನ್ನು ಐದು ನಿಮಿಷಗಳಲ್ಲಿ ಫೈರ್‌ವರ್ಕ್ಸ್ ಆರಂಭವಾಗುತ್ತದೆ ಎಂದು ಧ್ವನಿವರ್ಧಕದಲ್ಲಿ ಬಂದ ಶಬ್ದ ಪುರಾಣ ಕಾಲದ ಅಶರೀರವಾಣಿಯನ್ನು ನೆನಪಿಗೆ ತಂದಿತ್ತು.

ಪಾರ್ಕ್‌ನ ಯಾವುದೋ ಒಂದು ಮೂಲೆಯಲ್ಲಿ ಫೈರ್‌ವರ್ಕ್ಸ್ ಕಾಣುವುದೋ ಇಲ್ಲವೋ ಎಂಬ ಅನುಮಾನದಲ್ಲೇ ಕುಳಿತ ನಮಗೆ ಇನ್ನೂರು ಅಡಿಗಳಷ್ಟು ದೂರದಲ್ಲಿ ಸ್ವಚ್ಚಂದ ನಭದಲ್ಲಿ ಶಬ್ದಮಾಡಿಕೊಂಡು ಹಾರಿ ಥರಥರನ ರಂಗು ಮೂಡಿಸಿ ಮರೆಯಾಗುತ್ತಿದ್ದ ಪಟಾಕಿ, ಬಾಣಬಿರುಸುಗಳು ಸಾಕಷ್ಟು ಮುದನೀಡತೊಡಗಿದವು.

'there goes your tax dollar...' ಎಂದು ಸುಬ್ಬನ ಧ್ವನಿ ಗುಹೆಯೊಳಗಿನಿಂದ ಬಂದಂತೆ ಕೇಳಿಸಿತು, ಮೊದಲ ಎರಡು ನಿಮಿಷ ಸುಂದರವಾದ ಬಣ್ಣ ಬಣ್ಣದ ಪಟಾಕಿಯ ವೈವಿಧ್ಯಗಳನ್ನು ನೋಡಿ ಹೇಳಿದ ಕಾಮೆಂಟ್ ಅದಾಗಿತ್ತು.

ನಾನು, 'ಬರೀ ಬಣ್ಣಗಳನ್ನು ಮಾತ್ರ ನೋಡ್ಬೇಡಾ, ಆ ಪಟಾಕಿ ಹತ್ತಿ ಹಾರಿ ಸಿಡಿಯುವಾಗ ಬಣ್ಣದ ಹಿಂದಿನ ಹೊಗೆಯ ವಿನ್ಯಾಸವನ್ನೂ ನೋಡು' ಎಂದೆ.

'ಹೌದಲ್ವಾ, ಬರೀ ನಿನ್ನ್ ಟ್ಯಾಕ್ಸ್ ಡಾಲರ್ ಅಷ್ಟೇ ಅಲ್ಲ, ಒಂದ್ ರೀತಿ ಗ್ಲೋಬಲ್ ಪೊಲ್ಲ್ಯೂಷನ್ ಇದ್ದ ಹಾಗೆ ಇದು, ಇಂಥವನ್ನೆಲ್ಲ ಬ್ಯಾನ್ ಮಾಡ್ಬೇಕು' ಎಂದು ಸುಬ್ಬ ಹತ್ತು ವರ್ಷದಿಂದ ವಿಚಾರಣೆಗೆ ಒಳಪಟ್ಟ ಖೈದಿಗೆ ಮರಣದಂಡನೆ ವಿಧಿಸುವ ನ್ಯಾಯಾಧೀಶನಂತೆ ಹೇಳಿದ.

ಸ್ವಲ್ಪ ಚುಚ್ಚೋಣವೆಂದುಕೊಂಡು ನಾನು, 'ಹೌದು, ಅದೆಲ್ಲಾ ಹೊಟ್ಟೆಗೆ ಹಿಟ್ಟ್ ಇಲ್ದಿರೋ ಬಡ ದೇಶದೋರು ಹೇಳೋ ಮಾತು' ಎಂದೆ.

ಸುಬ್ಬ ತನಗೆ ನೋವಾದರೂ ತೋರಿಸಿಕೊಳ್ಳದೇ, 'ಒಂದ್ ಹೊಸ ಐಡಿಯಾ ಬಂತು! ಎಂದ.

ಟಾಪಿಕ್ ಏನಾದ್ರೂ ಬದಲಾಯಿಸ್ತಾನೋ ಎಂದು ಕುಹಕ ಯೋಚನೆ ನನ್ನ ತಲೆಯಲ್ಲಿ ಒಂದು ಕ್ಷಣದ ಮಟ್ಟಿಗೆ ಬಂದರೂ, ಇರಲಿ ನೋಡೋಣವೆಂದುಕೊಂಡು, 'ಏನಪ್ಪಾ ಅಂತಾ ಮಹಾ ಐಡಿಯಾ?' ಎಂದೆ.

'ಏನಿಲ್ಲ, ನಿನ್ನಂಥ ಘನಂದಾರೀ ತಲೇ ಇರೋ ಬೃಹಸ್ಪತಿಗಳನ್ನ ಒಂದೇ ಈ ಉಪಗ್ರಹ ಉಡಾವಣೇ ಮಾಡ್ತಾರಲ್ಲ, ಆಗ ಅವುಗಳಿಗೆ ಕಟ್ಟಿ ಹಾರಿಸ್‌ಬೇಕು, ಇಲ್ಲಾ ಈ ಪಟಾಕಿಗಳಿಗಾದ್ರೂ ಕಟ್ಟಿ ಬಿಟ್ಟು ಸುಮ್ನೇ ಹಾರಿಸಿ ಯಾವ್ದಾದ್ರೂ ಲೋಕಾ ಸೇರಿಸ್‌ಬೇಕು ನೋಡು' ಎಂದ. ಇವನೇನಪ್ಪಾ ಬಯ್ಯೋಕ್ ಶುರು ಹಚ್ಕೊಂಡ್ನಲ್ಲಾ ಎಂದು ಯೋಚಿಸ್ತಿದ್ದ ನನ್ನನ್ನು ತಡೆದು, 'ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ ತಿಳಕೋ!' ಎಂದು ಹೇಳಿ ಬಾಯಿ ಹೊಲಿಸಿಕೊಂಡವನಂತೆ ಸುಮ್ಮನಾಗಿ ಅದ್ಯಾವುದೋ ಪಥವನ್ನು ಹುಡುಕಿ ಮೇಲೆ ಹಾರುತ್ತಿದ್ದ ಪಟಾಕಿ ರಾಕೇಟುಗಳನ್ನು ನೋಡೋದರಲ್ಲಿ ತಲ್ಲೀನನಾಗಿ ಹೋದ, ನಾನು ನನ್ನ ಪ್ರಪಂಚದಲ್ಲಿ ಮುಳುಗಿಕೊಂಡೆ.

Thursday, July 26, 2007

...ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು...

'Life sucks!...' ಎನ್ನುವ ಪದಗಳು ಅಬ್ದಲ್ಲ್‌ನ ಬಾಯಿಯಿಂದ ತಮ್ಮಷ್ಟಕ್ಕೆ ತಾವೇ ಹೊರಬಿದ್ದವು, ತದನಂತರ ಒಂದು ಕ್ಷಣ ಧೀರ್ಘ ಮೌನ ನೆಲೆಸಿತ್ತು, ನಾನೇ ಕೇಳಿದೆ, 'ಹಾಗಾದ್ರೆ ಎಲ್ಲ್ ಹೋದ್ರೂ ನಮಗೆ ಸುಖಾ ಇಲ್ಲಾ ಅನ್ನು'. ಅದಕ್ಕವನ ಉತ್ತರ, 'ಹಾಗೇ ಅಂತ ಕಾಣ್ಸುತ್ತೆ...'

***

ಇದು ನನ್ನ ಮತ್ತು ನನ್ನ ಹತ್ತು ವರ್ಷದ ಸಹೋದ್ಯೋಗಿ-ಗೆಳೆಯ ಅಬ್ದುಲ್ಲ್‌ನ ನಡುವೆ ನಡೆದ ಕಳೆದ ಭಾನುವಾರದ ಮಾತುಕತೆಯ ಕೊನೆಯ ಒಂದೆರಡು ಸಾಲುಗಳು. ಅಬ್ದುಲ್ ಈ ದೇಶಕ್ಕೆ ಬಂದು ಹತ್ತಿರಹತ್ತಿರ ಹದಿನಾಲ್ಕು ವರ್ಷಗಳಾಗುತ್ತ ಬಂದಿರಬಹುದು, ಅವನು ಈಗ ಭಾರತಕ್ಕೆ ಹೋಗಿ ಅಲ್ಲೇ ನೆಲೆ ಊರುವ ಪ್ರಯತ್ನ ನಡೆಸಿದ್ದಾನೆ, ಅಂತಹ ಒಂದು ಬದಲಾವಣೆಗೆ ತಕ್ಕಂತೆ ನಿಧಾನವಾಗಿ ಒಂದೊಂದೇ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾನೆ. ಅವನ ಜೊತೆ ಮಾತನಾಡಿದಾಗಲೆಲ್ಲ, ಮಾತಿನ ಮೊದಲು ನಾನೂ ಅವನ ಹಾಗೆ ಹಿಂತಿರುಗಿ ಒಂದಲ್ಲ ಒಂದು ದಿನ ಹೊರಡುತ್ತೇನೆ ಎನ್ನುವ ಸಂತಸ ಉಕ್ಕಿ ಬರುತ್ತದೆ, ಸಂಭಾಷಣೆಯ ಕೊನೆಕೊನೆಗೆ ಅದು ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತದೆ, ಹೀಗೆ ಹಲವಾರು ಬಾರಿ ಆಗಿದೆ.

***

ಮಾತಿನ ಮಧ್ಯೆ, ನಾವು ಭಾರತಕ್ಕೆ ಹಿಂತಿರುಗಿದಾಗ low-profile ನಲ್ಲಿ ಬದುಕಲು ಶುರು ಮಾಡಬೇಕು ಇಲ್ಲವೆಂದಾದರೆ ಹಲವಾರು ತೊಂದರೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ. ಅವನ ಸ್ನೇಹಿತರೊಬ್ಬರು ಮದ್ರಾಸಿನ ಒಂದು ಒಳ್ಳೆಯ ಲೊಕೇಷನ್ನಲ್ಲಿ ಮನೆ ಕಟ್ಟಿಸಿಕೊಂಡಿದ್ದರಂತೆ, ಗೂಂಡಾಗಳು ದಿನವೂ ಅವರಿಗೆ ಮನೆಯನ್ನು ಮಾರುವಂತೆ ಹಿಂಸೆ ಕೊಡುತ್ತಿದ್ದರಂತೆ - ಅದೂ ಬಹಳ ಕಡಿಮೆ ಬೆಲೆಗೆ. ಈ ಗೂಂಡಾಗಳು, ಅವರ ಚೇಲಾಗಳ ಕಷ್ಟವನ್ನು ಸಹಿಸಲಾರದೆ ಅಲ್ಲಿ ಇರುವವರು ಹಲವಾರು ಮಂದಿ ಮನೆ-ನಿವೇಶನವನ್ನು ಅರ್ಧಕರ್ಧ ಬೆಲೆಗೆ ಮಾರಿದ್ದನ್ನು, ಈ ಗೂಂಡಾಗಳು ತಿರುಗಿ ಮಾರುಕಟ್ಟೆಯ ಬೆಲೆಗೆ ಬೇರೆಯವರಿಗೆ ಮಾರಿ ಬೇಕಾದಷ್ಟು ಹಣ ಸಂಪಾದಿಸುವ ಮಾರ್ಗವನ್ನು ಹಿಡಿದಿದ್ದಾರಂತೆ. ವಿದೇಶದಿಂದ ಬಂದವರು ಎಂದರೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಕೊಡುವವರೇ, ಮೇಲ್ನೋಟಕ್ಕೆ ಸಂತಾಪ ಸೂಚಿಸುವಂತೆ ಕಾಣಿಸುತ್ತಾರೆ, ಒಳಗೊಳಗೆ ವಿದೇಶದಿಂದ ಹಿಂತಿರುಗಿದವರೆಲ್ಲ ಮಹಾ ಶ್ರೀಮಂತರು ಎನ್ನುವ ಭ್ರಮೆಗೊಳಗಾಗಿ ಕಂಡಕಂಡಲ್ಲಿ ಸಾಕಷ್ಟು ಸುಲಿಗೆ ಮಾಡಲಾಗುತ್ತದೆ, ಬಹಳ ಜಾಗರೂಕತೆಯಿಂದಿರಬೇಕು... ಮುಂತಾಗಿ ಅವನ ಅನುಭವ, ಅವನು ಕೇಳಿ ತಿಳಿದ ಹಾಗಿನವುಗಳನ್ನೆಲ್ಲ ಕಳೆದ ಭಾನುವಾರ ನನ್ನ ಜೊತೆ ಹಂಚಿಕೊಂಡ. ಆಗಲೇ ಅನ್ನಿಸಿದ್ದು ನಮ್ಮದಲ್ಲದ ದೇಶದಲ್ಲಿ ಇರಲಾರದೆ ನಾವು ನಮ್ಮ ದೇಶಕ್ಕೆ ಹಿಂತಿರುಗಿದ್ದೇ ಹೌದಾದರೆ ಅಲ್ಲಿನ ಬದಲಾವಣೆಗಳಿಗೆ ದಿಢೀರನೆ ಸ್ಪಂದಿಸುವ ಮನಸ್ಥಿತಿಯನ್ನೂ ಜೊತೆಯಲ್ಲೇ ಕೊಂಡೊಯ್ಯಬೇಕು ಎಂಬುದಾಗಿ. ನಾವು ಇಲ್ಲಿ ಸುಖವಾಗಿ ಉಂಡು ಮಲಗಿದಾಗ ಕನಸಿನಲ್ಲಿ ಬರುವ 'ಊರಿಗೂ' ಅಲ್ಲಿನ ನಿಜಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿರೋದಂತೂ ನಿಜ. ಭಾರತದಲ್ಲಿ ಬದುಕಿ ಜಯಿಸಬೇಕು ಎಂದರೆ ಎಲ್ಲದರಲ್ಲೂ ಸಿದ್ಧಹಸ್ತರಾಗಿರಬೇಕು, ಯಾರು ಎಷ್ಟು ಹೊತ್ತಿನಲ್ಲಿ ಹೇಗೆ ಮೋಸ ಮಾಡುತ್ತಾರೆ ಅಂತಹವರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಆಲೋಚಿಸಿಕೊಳ್ಳುವುದರಲ್ಲೇ ದಿನನಿತ್ಯದ ಬದುಕು ನಡೆಯುತ್ತದೆ, ನಮ್ಮ ಸೂಕ್ಷತೆ ಸೃಜನಶೀಲತೆಯೆಲ್ಲಾ ಈ ಸಣ್ಣ ವಿವರಗಳನ್ನು ನೋಡುವಲ್ಲೇ ಕರಗಿಹೋಗುತ್ತವೆ.

ಜನನಿಭಿಡ ಸ್ಥಳಗಳಲ್ಲಿನ ಜೇಬುಕಳ್ಳರಿಂದ ಹಿಡಿದು, ಎರ್ರಾಬಿರ್ರಿ ಎಲ್ಲಿ ಬೇಕಂದರಲ್ಲಿ ವಾಹನಗಳನ್ನೋಡಿಸೋ ಸರದಾರರಿಂದ ಹಿಡಿದು, ಹಾಡು ಹಗಲೇ ಸೋಗು ಹಾಕಿಕೊಂಡು ಬಂದು ಕುತ್ತಿಗೆ ಕೊಯ್ಯುವವರಿಂದ ಹಿಡಿದು, ಅಮಾಯಕರನ್ನು ಹಿಂಸಿಸಲೆಂದೇ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಗೂಂಡಾ-ಪುಡಾರಿಗಳಿಂದ ಹಿಡಿದು, ಬೇಕೆಂದೇ ತಪ್ಪಾಗಿ ಗಲ್ಲಾ ಪೆಟ್ಟಿಗೆಯ ಹಿಂದೆ ಹಣವನ್ನು ಎಣಿಸಿಕೊಡುವ ಬ್ಯಾಂಕ್ ಕ್ಯಾಷಿಯರ್ರ್‌ನಿಂದ ಹಿಡಿದು, ಹತ್ತು ರೂಪಾಯ್ ಕೊಟ್ಟು ಒಂದು ಎಳೆನೀರು ಖರೀದಿ ಮಾಡಿದರೆ ಎಳನೀರನ್ನು ಆಸ್ವಾದಿಸುವ ಮುನ್ನ ಚಿಲ್ಲರೆಯನ್ನು ಸರಿಯಾಗಿ ಕೊಟ್ಟಿದ್ದಾನೆಯೇ ಎಂದು ಎಣಿಸಿ ಹುಷಾರಾಗಿ ಜೇಬಿನಲ್ಲಿಡುವುದರಿಂದ ಹಿಡಿದು, ಬಸ್‌ನಿಲ್ದಾಣ-ರೈಲ್ವೇ ನಿಲ್ದಾಣಗಳಲ್ಲಿ ಸದಾ ಲಗ್ಗೇಜನ್ನು ಕುತ್ತಿಗೆಗೆ ಸುತ್ತಿ ಹಾಕಿಕೊಂಡೇ ಕಾಲ ಕಳೆಯುವಂತಹ ಅತಿ ಬುದ್ಧಿವಂತಿಕೆಯ ಮನಸ್ಥಿತಿಯನ್ನು ಹುಟ್ಟುಹಾಕಿ ಅದನ್ನು ಕಾಯ್ದುಕೊಂಡು ಹೋಗುವಷ್ಟರಲ್ಲಿ ಭಾರತದಲ್ಲಿ ಹೋಗಿ ಅಲ್ಲೇ ಖಾಯಂ ಆಗಿ ನೆಲೆಸುವ ಕನಸುಗಳಲ್ಲೆಲ್ಲಾ ಕರಗಿ ಹೋಗುತ್ತವೆ.

***

ಭಾರತದ ಆಲೋಚನೆ, ಅದರ ಕಲ್ಪನೆಯನ್ನೆಲ್ಲಾ ನೆನೆಸಿಕೊಂಡರೆ ನನ್ನಂಥ ಅನಿವಾಸಿಗೆ ಎಂದೂ ರೋಮಾಂಚನವಾಗುತ್ತದೆ. ನಮ್ಮ ನಮ್ಮ ದೃಷ್ಟಿ ಬದಲಾಗಿದೆಯೇ ವಿನಾ ನಮ್ಮ ದೇಶ ಬದಲಾಗಿಲ್ಲ - ಈ ಹಿಂದೆಯೂ ಜೇಬುಕಳ್ಳರಿದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ನನ್ನ ಮಟ್ಟದ ಲಂಚರಹಿತ, ಭ್ರಷ್ಟಾಚಾರ ರಹಿತ ಬದುಕನ್ನು ಅನುಭವಿಸಿದ ಅನಿವಾಸಿಗಳಿಗೆ (ಭಾರತದಲ್ಲಿನ) ಅಲ್ಲಿನ ಪರಂಪರಾನುಗತವಾದ ಒಡಂಬಡಿಕೆಗಳು ನಮ್ಮ ಬದಲಾದ ಪ್ರಬುದ್ಧತೆಯ ನೆಲೆಗಟ್ಟಿನಲ್ಲಿ ನಮ್ಮನ್ನೇ ನಾವು ಪ್ರಶ್ನಿಸುವಂತೆ ಮಾಡುತ್ತವೆ. ಉದಾಹರಣೆಗೆ, ನೀವು ಸಾವಿರ ರೂಪಾಯಿಯ ವಸ್ತುವೊಂದನ್ನು ಕೊಂಡಿರೆಂದುಕೊಳ್ಳೋಣ. ಅಂಗಡಿಯವನು ಹೇಳುತ್ತಾನೆ, ನೋಡಿ ನೀವು ಸಾವಿರ ರೂಪಾಯಿ ಕ್ಯಾಷ್ ಕೊಡಿ, ನಾನು ಟ್ಯಾಕ್ಸ್ ಸೇರಿಸೋದಿಲ್ಲ, ಇಲ್ಲವೆಂದಾದರೆ ನೀವು ಇಪ್ಪತ್ತು ಪರ್ಸೆಂಟ್ ಟ್ಯಾಕ್ಸ್ ಕೊಡಬೇಕು ಎಂಬುದಾಗಿ. ಆಗ ನೀವೇನು ಮಾಡುತ್ತೀರಿ? ಅಂಗಡಿಯವನಿಗೆ ಸಾವಿರದ ಇನ್ನೂರು ರೂಪಾಯಿ ಕೊಟ್ಟು ನ್ಯಾಯವಾಗಿ ರಶೀದಿಯನ್ನು ಪಡೆಯುತ್ತೀರೋ ಅಥವಾ ಕೇವಲ ಸಾವಿರ ರೂಪಾಯಿಯನ್ನು ಕೊಟ್ಟು ಇನ್ನೂರು ರೂಪಾಯಿಯ ತೆರಿಗೆಯನ್ನು ಉಳಿಸಿದ್ದಕ್ಕಾಗಿ ಖುಷಿ ಪಡುತ್ತೀರೋ? ಇದಕ್ಕೆ ಇನ್ನೂ ಒಂದು ಟ್ವಿಷ್ಟ್ ಕೊಡುತ್ತೇನೆ - ನೀವು ಕೊಟ್ಟ ಇನ್ನೂರು ರೂಪಾಯಿ ತೆರಿಗೆ ನ್ಯಾಯವಾಗಿ ಸರ್ಕಾರಕ್ಕೆ ಸೇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ - ಏಕೆಂದರೆ ಅಂಗಡಿಯವನು ರಾಮನ ಲೆಕ್ಕ, ಕೃಷ್ಟನ ಲೆಕ್ಕ ಎಂಬುದಾಗಿ ಎರಡೆರಡು ಪುಸ್ತಕಗಳನ್ನಿಟ್ಟುಕೊಂಡಿರಬಹುದು, ಅಥವಾ ಅವನು ಟ್ಯಾಕ್ಸ್ ಸೇರಿಸಿಕೊಟ್ಟಿದ್ದೇನೆ ಎಂಬುದು ನಿಜವಾದ ರಶೀದಿ ಅಲ್ಲದಿರಬಹುದು - ಅಥವಾ ಅವನ ಅಂಗಡಿಯೇ ಟ್ಯ್ಹಾಕ್ಸ್ ದಾಖಲೆಗಳಲ್ಲಿ ಲೆಕ್ಕಕ್ಕಿರದಿರಬಹುದು.

ಈ ಮೇಲಿನ ಪ್ರಶ್ನೆಗಳ ಉತ್ತರದಲ್ಲೇ ಅಡಗಿದೆ ನಮ್ಮ ನ್ಯಾಯಾನ್ಯಾಯ. ನೀವು ಈ ಪ್ರಶ್ನೆಗಳಿಗೆ ಕೊಡಬಹುದಾದ ಉತ್ತರ ಎಲ್ಲಾ ದೇಶದಲ್ಲೂ ಒಂದೇ ಇರುತ್ತದೆ ಎಂದು ಹೇಳಲಾಗದು. ನಮ್ಮೂರುಗಳಲ್ಲಿ ಕಾನೂನನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವ ಮಂದಿ ಹೊರದೇಶದ ನೀರು ಕುಡಿದಾಕ್ಷಣ ತಮ್ಮ ಬಾಲವನ್ನು ಕಾಲುಗಳ ನಡುವೆ ಮುದುರಿಕೊಳ್ಳುವ ನಿರೂಪಣೆಗಳು ಹೊಸದೇನಲ್ಲ. ನಾವು, ಅನಿವಾಸಿಗಳು ಸಾವಿರ ರೂಪಾಯಿಗೆ ಇನ್ನೂರು ರೂಪಾಯಿಯ ತೆರಿಗೆಯನ್ನು ಕೊಡಲು ಸಿದ್ಧರಿದ್ದೇವು, ಆದರೆ ಅಲ್ಲೇ ದುಡಿದು ಸಂಪಾದನೆ ಮಾಡುವ ಜನರಿಗೆ ತೆರಿಗೆ ಕಟ್ಟಬೇಕು ಎನ್ನುವ ಮೌಲ್ಯದ ಮುಂದೆ ಬೇಕಾದಷ್ಟು ಅಡ್ಡಿ ಆತಂಕಗಳು ಇರಬಹುದು, ಇನ್ನು ಕೆಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತೇ ಇರದಿರಬಹುದು. ನನ್ನನ್ನು ಕೇಳಿದರೆ, ಈವರೆಗೆ ತಮ್ಮ ತಮ್ಮ ನಿವೇಶನಗಳನ್ನು ಯಾರು ಯಾರು ಇರುವ ಬೆಲೆಗಿಂತ ಕಡಿಮೆ ಬೆಲೆಗೆ ನೋಂದಣಿ ಮಾಡಿಕೊಂಡಿದ್ದಾರೋ, ಹಾಗೆ ಮಾಡಿಸುವಲ್ಲಿ ಲಂಚವನ್ನು ಕೊಟ್ಟಿದ್ದಾರೋ ಅಂತಹವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಯಾ ವಿಷವರ್ತುಲದಲ್ಲಿ ಭಾಗಿಗಳೇ.

ಈ ಲಂಚ, ಭ್ರಷ್ಟಾಚಾರ ಎನ್ನುವ ಆಟದಲ್ಲಿ ಒಮ್ಮೆ ಭಾಗವಹಿಸಿದರೆ ನಮಗೆ ಯಾವಾಗ ಹಿಂದೆ ಬರಬೇಕೆನ್ನಿಸುವುದೋ ಆಗ ಹಿಂದೆ ಬರುವುದು ಕಷ್ಟ ಸಾಧ್ಯ - ರೌಡಿಗಳ ಗುಂಪಿನಲ್ಲಿರುವವನು ದಿಢೀರನೆ ಸಾಚಾ ಆಗಲು ನೋಡಿದರೆ ಅದರ ಪರಿಣಾಮವೇನಾದೀತೆಂದು ಹೆಚ್ಚಿನವರಿಗೆ ಗೊತ್ತು.

***

ಹಾಗಾದ್ರೆ, ಇಲ್ಲಿರಲಾಗದವನು ನಾನೆಲ್ಲಿಗೆ ಹೋಗಲಿ? ಹಿಂದಕ್ಕೆ ಹೋಗೋದಾದರೆ ಎಲ್ಲಿಗೆ ಹೋಗುತ್ತೇವೆ, ಏಕೆ ಹೋಗುತ್ತಿದ್ದೇವೆ, ಯಾರಿಗೋಸ್ಕರ ಹೋಗುತ್ತಿದ್ದೇವೆ. ಇಲ್ಲಿ ಸಾಧಿಸದ್ದನ್ನು ಅಲ್ಲಿ ಏನು ಸಾಧಿಸುವುದಿದೆ?

ಈ ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ದೊರಕಿಸಿಕೊಳ್ಳಲು ದಿನೇದಿನೇ ಕಡಿಮೆ ಆಗುವ ಡಾಲರ್ ಬೆಲೆಯಾಗಲೀ, ನೆನಪಿನ ಸುರುಳಿಗಳಿಂದ ಮರೆಯಾಗುವ ಮಿತ್ರರಾಗಲೀ, ಅಥವಾ ಕಾಲನ ವಶಕ್ಕೆ ಸಿಕ್ಕು ದೂರವಾಗುವ ಬಂಧು ಬಳಗವಾಗಲೀ ಸಹಾಯವೇನನ್ನೂ ಮಾಡರು. ಜೊತೆಗೆ ವಿದೇಶದ 'ಸಾಚಾ' ಹವೆಯಲ್ಲಿ ಇಷ್ಟೊಂದು ವಸಂತಗಳನ್ನು ಹಾಯಾಗಿ ಕಳೆದು ದಡ್ಡು ಬಿದ್ದ ಮೈ ಮನಗಳೂ - ಒಡನೆಯೇ ಮತ್ತೆ ಕಷ್ಟ ಪಡಬೇಕಾಗುತ್ತದೆಯೆಲ್ಲಾ ಎನ್ನೋ ಹೆದರಿಕೆಗೆ ಸಿಕ್ಕು - ಸಹಕರಿಸಲಾರವು.

ಬಾಬೂ ಥರ ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು - ನಮ್ಮ ದೇಶ ಬೇಕಾದಷ್ಟು ಬೆಳೆದಿದೆ ಈ ದಶಕದಲ್ಲಿ ಅದನ್ನು ಆರಾಮವಾಗಿ ಹಾಗೂ ಸಹಜವಾಗಿ ಆಸ್ವಾದಿಸಿಕೊಂಡು ಅದರಲ್ಲೊಂದಾಗಬೇಕಿತ್ತು, ...we are at the wrong place at the wrong time...ಎಂದು ಬೇಕಾದಷ್ಟು ಸಾರಿ ಅನ್ನಿಸೋದಂತೂ ನಿಜ.

Tuesday, July 24, 2007

ಖಾಲೀ ಹಾಳೆ

ಓಹ್, ಬೇಡವೆಂದರೂ ತೆರೆದುಕೊಂಡು ಕುಳಿತಿದೆ ಖಾಲೀ ಹಾಳೆ! ಪಕ್ಕದಲ್ಲಿರುವ ದೀಪ ತನ್ನ ಸುತ್ತಲು ಚೆಲ್ಲುತ್ತಿರುವ ಬೆಳಕೆಷ್ಟೋ, ಅಪರಿಮಿತದಲ್ಲಿ ಪರಿಮಿತವಾಗಿರುವ ಈ ಬೆಳಕಿಗೆ ಬಿದ್ದ ನಾನಾ ವಸ್ತುಗಳು ಹೊಳೆಯ ತೊಡಗಿವೆ, ಅಂದರೆ ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿಕೊಂಡು. ಹಾಗೆ ಪ್ರತಿಫಲಿಸಿದ ಬೆಳಕು ಮತ್ತಿನ್ನೆಲ್ಲೋ ಬಿದ್ದು, ಮತ್ತೆ ಪ್ರತಿಫಲನ - ಹೀಗೆ ಕೋಣೆಯುದ್ದಕ್ಕೂ ತುಂಬಿದ ಹಲವು ರೇಖೆಗಳು. ಊಹ್ಞೂ, ರೇಖೆಗಳು ಅಂದರೆ ಅದು ನಮ್ಮ ಮಿತಿಯಾದೀತು, ಕಂಡಕಂಡಲ್ಲಿ ಹರಡಿಕೊಂಡಿರುವ ಒಂದು ವಸ್ತು ಎಂದು ಬಿಟ್ಟರೆ ಬೆಳಕಿಗೆ ಜೀವವಿಲ್ಲವೇ ಎಂದು ಯಾರಾದರೂ ಕೇಳಿಬಿಟ್ಟಾರು ಎಂಬ ಹೆದರಿಕೆ. ಇವೆಲ್ಲದರ ನಡುವೆ ಇದೊಂದು ಖಾಲೀ ಹಾಳೆ, ನನ್ನನ್ನು ತುಂಬಿಸು, ತುಂಬಿಸಿಕೋ ಎಂದು ಗೋಗರೆದರೆಂತೆ ಮೇಲ್ನೋಟಕ್ಕೆ ಕಂಡುಬಂದರೂ ಅದರ ಮನಸ್ಸು, ಅದರ ಹಿಂದಿನ ಸತ್ವವೆಲ್ಲ ಒಬ್ಬ ಋಷಿಯ ಹಾಗೆ - ಎಲ್ಲವನ್ನೂ ಬಲ್ಲೆ, ಎಲ್ಲವನ್ನೂ ಒಳಗೊಂಡಿಹೆ, ಆದರೆ ಏನನ್ನೂ ಅರಿಯದವನು ಎಂಬ ಸದಾ ಮುಗ್ಧ ಮುಖವನ್ನು ತೋರಿಸಿಕೊಂಡಿರುವಂತಹದು.

ಎಷ್ಟೇ ನಿಧಾನವಾಗಿ ಉಸಿರಾಡಿದರೂ ಕೇಳಿಸಬಹುದಾದಂತಹ ಮೌನ. ಬೆಳಕಿಗೆ ಹೊಳೆಯುತ್ತಿರುವ ಸುತ್ತಲಿನ ವಸ್ತುಗಳೆಲ್ಲ ನನ್ನ ಬಗ್ಗೆ ಬರಿ ನನ್ನ ಬಗ್ಗೆ...ಎಂದು ಕೂಗುತ್ತಿರುವವೇನೋ ಎಂಬ ಕೊರಗನ್ನು ಹೊತ್ತುಕೊಂಡಿರುವ ಭಾರವಾದ ಮೌನ. ನಮ್ಮ ಸುತ್ತಲಿನ ವಸ್ತು ವಿಷಯಗಳಿಗೆಲ್ಲ ಭಾಷೆ ಇದೆಯೇ ಎಂದು ಸೋಜಿಗಪಡುವಷ್ಟರ ಮಟ್ಟಿಗಿನ ಸಂಕೀರ್ಣವಾದ ಸಂವಾದ, ಅವುಗಳನ್ನು ಅರ್ಥ ಮಾಡಿಕೊಂಡಿದ್ದೇವೆಂಬ ಭ್ರಮೆಯಲ್ಲಿರಬಹುದಾದ ನಾವುಗಳು. ಜೊತೆಯಲ್ಲಿ ವಸ್ತುವಿನ ರೂಪ ನೋಡುಗರ ಕಣ್ಣಲ್ಲಿ ಎಂಬ ತಿಪ್ಪೆ ಸಾರಿಸುವ ಪ್ರಕ್ರಿಯೆ ಬೇರೆ!

ಈ ಖಾಲೀ ಹಾಳೆ ಯಾರಿಗೋಸ್ಕರ ತೆರೆದುಕೊಂಡಿದೆ? ಈ ಹಾಳೆಯ ಮೂಲೆ ಮೂಲೆಗಳಿಗೆ ಅಕ್ಷರವನ್ನು ಸ್ಥಾಪಿಸುತ್ತೇವೆಂದು ಯಾರೂ ಈ ವರೆಗೆ ಭಾಷೆ ನೀಡಿರದಿದ್ದರೂ ಬೆಳಕಿಗೆ ಹೊಳೆದು ಅದು ಬೀಗಿದಂತೆ ತೋರುವುದೇಕೆ? ಬಿಳಿ ಬಣ್ಣವೇ, ಅಂದರೆ ಖಾಲೀ ಹಾಳೆಗೂ ಒಂದು ಸ್ವರೂಪವಿದೆಯೆಂದಾಯಿತೇ? ಬಿಳಿಯಲ್ಲಿ ಬೇರೆಲ್ಲ ಬಣ್ಣಗಳಡಗಿವೆಯೆಂದಾದರೆ ಖಾಲೀ ಹಾಳೆಯಲ್ಲಿ ಎಲ್ಲವೂ ಇವೆಯೆಂದೇ? ಎಲ್ಲವೂ ಇದ್ದ ಮೇಲೆ ಅದು ಖಾಲೀ ಹೇಗಾಯಿತು? ಓಹ್, ಅಕ್ಷರಗಳು - ಇಂತಹ ಖಾಲೀ ಹಾಳೆಯನ್ನು ತುಂಬಿಸಿ ಮೋಕ್ಷ ನೀಡಬಲ್ಲ ಏಕೈಕ ಮಾರ್ಗ.

ಈ ಖಾಲೀ ಹಾಳೆಯ ಹೊರ ಮೈ ಹೀಗಿದ್ದರೆ ಒಳ ಮೈ ಹೇಗಿದ್ದಿರಬಹುದು ಎಂದು ಅನೇಕ ಸಾರಿ ಯೋಚನೆ ಬಂದಿದ್ದಿರಬಹುದು. ಹಾಳೆಗೆ ಎಷ್ಟು ಮುಖವೆಂದು ಕೇಳಿದರೆ ಎರಡು ಎಂದು ಮಕ್ಕಳು ಬೇಕಾದರೂ ಉತ್ತರಿಸಿಯಾರು, ಇದ್ದರೂ ಇಲ್ಲದಂತೆ ತೋರುವ ಇನ್ನು ನಾಲ್ಕು ಮುಖಗಳನ್ನು ಯಾರೋ ಹಾಗಾದರೇ ನೋಡೋದೇ ಇಲ್ಲವೇನು? ದೊಡ್ಡದಾಗಿ ಕಂಡ ಎರಡೇ ಎರಡು ಮುಖಗಳು ಇನ್ನುಳಿದ ನಾಲ್ಕು ಮುಖಗಳಿಗೆ ಧ್ವನಿಯಾಗಬೇಕು ಎಂದರೆ? ಯಾವುದೋ ಕಾಡಲ್ಲಿ ನೀರುಂಡು ಬೆಳಿದಿದ್ದ ಮರದ ಕಾಂಡ, ಅಥವಾ ತೊಗಟೆಯ ಪರಿಶ್ರಮವಿದಾಗಿರಬಹುದು, ಅಥವಾ ಮಾನವನ ಊಹೆಯ ಮಿತಿಯಲ್ಲಿ ಸಿಕ್ಕ ಅನೇಕ ವಸ್ತುಗಳ ಸಂಗಮದ ಸ್ವರೂಪವಾಗಿರಬಹುದು, ಬಿಳಿ ಅಲ್ಲದ್ದನ್ನು ಮೂಳೇ-ಇದ್ದಿಲನ್ನು ಹಾಕಿ ತೆಗೆದ ಹೊಸ ಮೇಲ್ಮೈ ಇದ್ದಿರಬಹುದು.

ಈ ಖಾಲೀ ಹಾಳೆ ತೆಳ್ಳಗಿದೆ, ಬೆಳ್ಳಗಿದೆ. ಬಳುಕುತ್ತದೆ, ಜೊತೆಗೆ ಗಾಳಿ ಬಂದೆಡೆಯೆಲ್ಲಾ ಹಾರಿ ಹೋಗುತ್ತದೆ. ಅದೊಂದು ಮಿತಿಯೇ ಸರಿ, ನಿರ್ವಾತದಲ್ಲಿ ಈ ಹಾಳೆಯ ಆಟವೇನೂ ನಡೆಯದು. ತನ್ನ ತೂಕಕ್ಕೆ ತಾನೇ ತೊನೆಯದ ಇದೂ ಒಂದು ವಸ್ತು, ಅದರದ್ದೂ ಒಂದು ಅಸ್ತಿತ್ವ. ಬರೀ ಅಕ್ಷರಗಳನ್ನು ಮೂಡಿಸಿ ಇದರ ಬದುಕನ್ನು ಪರಮಪಾವನ ಮಾಡಬೇಕೆಂದೇನೂ ಎಲ್ಲಾ ಸಮಯದಲ್ಲಿ ವಿಧಿ ಬರೆಯೋದಿಲ್ಲ, ಎಷ್ಟೋ ಸಾರಿ ಮೂಗು ಒರೆಸಿಯೋ, ಇಲ್ಲಾ ಕೈ ತೊಳೆದು ಹಸಿಯನ್ನು ವರ್ಗಾಯಿಸಿಯೋ ತಿಪ್ಪೆಗೆ ಬಿಸಾಡಿದ ಸನ್ನಿವೇಶಗಳು ಬೇಕಾದಷ್ಟಿವೆ. ತನ್ನ ಅಗಲವಾದ ಮುಖದ ಮೇಲೆ ಅಕ್ಷರಗಳನ್ನು ತುಂಬಿಸಿ ಹಾಗೆ ಮೋಕ್ಷ ಸಿಗುತ್ತದೆ ಎಂದು ಕಾದದ್ದು ಹುಸಿಯಾಗಿದೆ. ಬಾಯಿಂದಾಡಿದ್ದಷ್ಟೇ ಬಾಷೆಯಾಗುಳಿಯದೇ ಚಲನವಲನಗಳು ಸೃಷ್ಟಿಸೋ ಸ್ಪಂದನಗಳನ್ನು ಖಾಲೀ ಹಾಳೆ ತೆರೆದಿಡುವಲ್ಲಿ ಸೋತಿದೆ, ಮಸಿ ಬಿದ್ದರೇನೂ ಮೂಡುವುದು ಅಕ್ಷರವಾದರೆ ಇನ್ನು ಮಸಿಗೆ ಮೀರಿದ ಮಾತುಗಳಿಗೆ ಈ ಹಾಳೆ ಯಾವ ನೆಲೆಗಟ್ಟನ್ನು ಒದಗಿಸಿಕೊಡಬಲ್ಲದು? ಹೋಗಲಿ, ಅಂತಹವುಗಳನ್ನು ಈವರೆಗೆ ಯಾರಾದರೂ ಎಲ್ಲಾದರೂ ಹೇಗಾದರೂ ಬರೆಯಲು ಯತ್ನಿಸಿದ್ದಾರೇನು?

ಇಂತಹ ಖಾಲೀ ಹಾಳೆ ಯಾರಾದರೂ ನನ್ನ ಮುಖದ ಮೇಲೆ ಬರೆದಾರೇನೋ ಎಂದು ನಿರುಕಿಸುತ್ತದೆ - ಹೊರಗಿನ ಹವಾಮಾನವನ್ನು ಒಂದೇ ನೋಟದಲ್ಲಿ ಅಳೆಯೋ ಹುಡುಗನ ಹಾಗೆ, ಮುಂದೆ ಮಳೆಬರಬಹುದಾದ ಸೂಚನೆಯನ್ನು ಕಂಡು ಆಡಲು ಹೋಗಲಾಗುವುದಿಲ್ಲವಲ್ಲಾ ಎಂದು ಹಪಹಪಿಸೋ ದಾರುಣ ನೋಟವನ್ನು ನೀಡುತ್ತದೆ. ಎಷ್ಟೋ ಸಾರಿ ಅನ್ನಿಸಿದೆ, ಈ ಖಾಲೀ ಹಾಳೆಯದು ದೇವಸ್ಥಾನದ ಆವರಣದಲ್ಲಿ ಭಿಕ್ಷೆ ಬೇಡುವ ಭಿಕ್ಷುಕರ ಹಾಗಿನ ಪರಿಸ್ಥಿತಿ ಎಂದು. ಖಾಲೀ ಹಾಳೆಯ ಈ ಖಾಲೀ ತನ ಮುಖ್ಯ ಮುಂದೆ ಹೊಸದನ್ನೇನಾದರೂ ತುಂಬಿಕೊಳ್ಳಲು, ಒಮ್ಮೆ ತುಂಬಿಸಿಕೊಂಡ ಮೇಲೆ ಮತ್ತೆ ಖಾಲೀಯಾಗುವುದು ಎಂಬುದೇನೂ ಇಲ್ಲ, ಆದ್ದರಿಂದಲೇ ಬೇಡುವವನಿಗೆ ತನಗೇನು ಸಿಗಬಹುದು ಎಂಬ ಸೂಕ್ಷ್ಮವಿರಬೇಕು ಎನ್ನುವುದು. ಒಂದು ವೇಳೆ ಬಯಸಿದ್ದು ಸಿಕ್ಕೇ ಬಿಟ್ಟಿತು ಎನ್ನೋಣ ಆಗ ಖಾಲಿ ಇದ್ದದೂ ತುಂಬಿಕೊಳ್ಳುತ್ತದೆ, ಒಮ್ಮೆ ತುಂಬಿಕೊಂಡದ್ದು ಮತ್ತೆ ಖಾಲಿಯಾಗದು ಎಂಬ ಅಳುಕನ್ನು ಈವರೆಗೆ ಎಲ್ಲಿಯೂ ಯಾರಲ್ಲಿಯೂ ನೋಡಿದ್ದಿಲ್ಲ!

Sunday, July 22, 2007

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

Friday, July 20, 2007

...ನೆರೆಹೊರೆಗೆ ನಮಿಸುತ್ತಾ....

ಸಾಕು, ಎಷ್ಟೂ ಅಂತ ಬರೆಯೋದು ಈ ಬ್ಲಾಗ್‌ನಲ್ಲಿ, ನಿಲ್ಲಿಸಿಬಿಡೋಣ ಒಂದು ದಿನ - ಎನ್ನೋ ಆಲೋಚನೆ ಬಂದಿದ್ದೇ ತಡ ನಾನು ಬರೆದದ್ದನ್ನೆಲ್ಲಾ ಒಮ್ಮೆ ನೋಡಿಕೊಂಡು ಬಂದೆ. ೨೦೦೬ ರ ಮೇ ತಿಂಗಳಿನಲ್ಲಿ ನನಗೆ ಅದ್ಯಾವ ಭೂತ ಆವರಿಸಿಕೊಂಡಿತ್ತೋ ಗೊತ್ತಿಲ್ಲ, ಮೂವತ್ತೊಂದು ದಿನಗಳಲ್ಲಿ ಮೂವತ್ತೊಂದು ಬರಹಗಳನ್ನು ಪ್ರಕಟಿಸಿದ ದಾಖಲೆ ಅದು!

ಏನಾಗಿತ್ತು ಮೇ ೨೦೦೬ ರಲ್ಲಿ ಎಂದು ಅಲ್ಲಿನ ಬರಹಗಳನ್ನು ತಿರುವಿ ಹಾಕಿಕೊಂಡು ಬಂದರೆ (ಇತರರು ಹೇಳುವಂತೆ) ಈ ಬ್ಲಾಗ್‌ನ ಎಷ್ಟೋ ಮುಖ್ಯ ಲೇಖನಗಳು ಅಲ್ಲಿ ಕಂಡು ಬಂದವು. ಕೆಲವು ದಿನಚರಿಗೆ ಸಂಬಂಧಿಸಿದ್ದು, ಇನ್ನು ಕೆಲವು ಹಾಸ್ಯ, ಇನ್ನು ಕೆಲವು ದೈನಂದಿನ ಅನುಭವ, ಕೆಲವು ಸಂವಾದ, ಒಂದಿಷ್ಟು ನ್ಯೂ ಯಾರ್ಕ್ ನಗರವನ್ನು ಕುರಿತು, ಇತ್ಯಾದಿ. ಹಳೆಯ ಆಫೀಸಿನಲ್ಲಿ ಹಳೆಯ ಕೆಲಸದಲ್ಲಿ ಕುಳಿತಿದ್ದಾಗ ಆಗ ಹೆಚ್ಚು ಸಮಯವಿರುತ್ತಿತ್ತೆಂದೋ, ಆಗಷ್ಟೇ ಹೊರ ಬರುತ್ತಿದ್ದ, ಹೊರಬಂದ ಬ್ಲಾಗ್ ಪ್ರಪಂಚದ ಅರಿವು ಇನ್ನೂ ಬಿಸಿಯಾಗೇ ಇತ್ತೆಂದೋ, ಬರೆಯುವ ಹುರುಪಿನಲ್ಲಿ ಏನೇನೆಲ್ಲವನ್ನು ಕುಟ್ಟಿಕೊಂಡು ಹೋಗುವ ಧೈರ್ಯವಿತ್ತೆಂದೋ ಯೋಚಿಸಿಕೊಂಡು ಬಂದೆ. ಊಹ್ಞೂ, ಅದೆಲ್ಲ ಸರಿಯಾದ ಕಾರಣವೇ ಅಲ್ಲ...ವ್ಯಸ್ತರಾದಷ್ಟೂ ಸೃಜನಶೀಲತೆ ಹೆಚ್ಚುತ್ತಂತೆ! ಎಂದು ಹೊಸ ಹೇಳಿಕೆಯನ್ನು ಕೊಡುವ ಯತ್ನವಷ್ಟೇ.

"...ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?) " ಎಂದು ಹಿಂದೆ ಬರೆದ ಮಾತು ನಿಜ - ಹೆಚ್ಚು ಬರೆಯಬೇಕು ಎಂದರೆ ಹೆಚ್ಚು ಹೆಚ್ಚು ಓದಬೇಕು, ಅದಕ್ಕೇ ಬಂದಿರೋದು ದೊಡ್ಡ ಕೊರತೆ. ಸರಿ ಒಂದಿಷ್ಟು ಏನನ್ನಾದರೂ ಓದೋಣವೆಂದುಕೊಂಡು ಹಠಮಾರಿತನದಿಂದ ಲೈಬ್ರರಿಯಿಂದ ಆರೇಳು ಪುಸ್ತಕವನ್ನು ತಂದುಕೊಂಡು ಓದಲು ತೊಡಗಿದರೆ ಯಾವುದೂ ರುಚಿಸಲಿಲ್ಲ - ಈ ಬೆಸ್ಟ್ ಸೆಲ್ಲರ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡ ಪುಸ್ತಕಗಳನ್ನು ಇನ್ನು ಮುಂದೆ ಓದಲೇ ಬಾರದು ಎನ್ನುವ ಇನ್‌ಫರೆನ್ಸ್ ಬರುವಷ್ಟು ನಿರಾಶೆ, ಅವುಗಳಲ್ಲೇ ಕಷ್ಟಪಟ್ಟು ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದರೆ ಅದರ ಹೆಸರನ್ನು ನೆನಪಿನಲ್ಲಿಡಲಾರದಷ್ಟು ಯೋಗ್ಯ ಪುಸ್ತಕಗಳವು. ಅವುಗಳನ್ನು ತಂದ ತಪ್ಪಿಗೆ ಹೋಗಿ ಲೈಬ್ರರಿಗೆ ಹೋಗಿ ಬಿಸಾಕಿ ಬಂದದ್ದಾಯಿತು.

ಯಾವ್ದಾದ್ರೂ ಕನ್ನಡ ಪುಸ್ತಕ ಓದೋಣ ಎಂದರೆ ಹೊಸದೇನೂ ಕಾಣಿಸ್ತಿಲ್ಲ - ಕಂಡ ಕಂಡವರಿಗೆ ಫೋನ್ ಮಾಡಿ 'ಆವರಣ' ಇದ್ರೆ ಕೊಡಿ ಅಂತ ಕೇಳ್ಕೊಂಡೆ, ಇನ್ನೊಂದ್ ವಾರದಲ್ಲಿ ಯಾರಾದ್ರೂ ಪುಣ್ಯಾತ್ಮರು ಕಳಿಸ್ತಾರೆ ಅಂತ ಗೊತ್ತು - ಅದನ್ನಾದರೂ ಸ್ವಲ್ಪ ಅಸ್ಥೆಯಿಂದ ಓದಬೇಕು. ಆವರಣ ಓದಿದ ಮೇಲೆ ಓದೋಣ ಎಂದು ಬದಿಗೆ ಸರಿಸಿಟ್ಟ ಲೇಖನ, ವಿಮರ್ಶೆ, ಚರ್ಚೆಗಳ ಪಟ್ಟಿ ಬಹಳ ದೊಡ್ಡದಿದೆ - ನನ್ನ ಮೂಲ ಓದಿಗೆ ಧಕ್ಕೆಯಾಗಬಾರದು, ಅದರಲ್ಲಿ ಯಾರ ಇನ್‌ಫ್ಲುಯೆನ್ಸೂ ಇರಬಾರದು ಎಂಬ ಹಠಕ್ಕೆ ಬಿದ್ದು ನಾನು ಉಳಿದವನ್ನೆಲ್ಲಾ ಬದಿಗಿಟ್ಟಿದ್ದೇನೆ. ಕನ್ನಡ ಪುಸ್ತಕಗಳು ಹ್ಯಾರಿ ಪಾಟ್ಟರ್ ರೀತಿಯ ಪಬ್ಲಿಸಿಟಿಯನ್ನು ಕಾಣುವುದು ಯಾವ ಕಾಲಕ್ಕಿದೆಯೋ, ಆದರೆ ನನ್ನಂತಹವರಿಗೆ ದೇಹದಲ್ಲಿ ರಕ್ತ ಸ್ವಲ್ಪ ವೇಗವಾಗೇನಾದರೂ ಓಡಾಡುವುದಿದ್ದರೆ ಅದು ಹೊಸ ಕನ್ನಡ ಪುಸ್ತಕದ ಬಿಡುಗಡೆಯ ಸುದ್ದಿಯಿಂದಲೇ!

***

ತಿಂಗಳಿಗೆ ಹತ್ತು, ಇಪ್ಪತ್ತು, ಮೂವತ್ತು ಲೇಖನಗಳನ್ನು ಬರೆಯೋದು ದೊಡ್ಡ ವಿಷಯವಲ್ಲ, ಆ ಲೇಖನಗಳಲ್ಲಿ ಕ್ವಾಲಿಟಿ, ಕನ್‌ಸಿಸ್ಟೆನ್ಸಿ, ಹೊಸತೇನಾದರೊಂದನ್ನು ಪ್ರಸ್ತುತ ಪಡಿಸೋದು ಮುಖ್ಯ. ಎನ್‌.ಪಿ.ಆರ್‌ನ ಮಾರ್ನಿಂಗ್ ಎಡಿಷನ್‌ನಲ್ಲಿ ಬ್ರಿಟೀಷ್ ಸಿನಿಮಾ ನಿರ್ದೇಶಕ ಡ್ಯಾನ್ನಿ ಬಾಯ್ಲ್ (Danny Boyle) ಬಗ್ಗೆ Sunshine ಸಿನಿಮಾದ ರಿವ್ಯೂವ್‌‍ನಲ್ಲಿ ..., whose eclectic résumé, including Millions, Trainspotting, and 28 Days Later, reveals a refusal to make the same film twice...ಎಂದು ಕೆನೆತ್ ಟುರಾನ್ ಧ್ವನಿಯಲ್ಲಿ ಕೇಳಿದೊಡನೆ ಆ ಸಿನಿಮಾವನ್ನು ನೋಡಬೇಕು, ಈ ನಿರ್ದೇಶಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎನ್ನಿಸಿದ್ದಂತೂ ನಿಜ.

ಹೌದು, ನನ್ನ ಬರಹಗಳು ಸ್ಪೈಡರ್‌ಮ್ಯಾನ್ ಥ್ರೀ ತೋರಿಸೋ ಪಕ್ಕದ ಥಿಯೇಟರ್ರ್‌ನಲ್ಲಿನ ಕಪ್ಪೂ-ಬಿಳಿ ಚಿತ್ರದಂತಾಗಬಾರದು. ಹಾಗಂತ, ಅವುಗಳು ನಾನೇ ಓದಿ ಮುಗಿಸಲಾರದ ಬೆಸ್ಟ್ ಸೆಲ್ಲರ್ ಪುಸ್ತಕವಾಗಲೂ ಕೂಡದು. ಹೊಸತನ್ನಾಗಲೀ, ವಿಶೇಷವಾಗಿರೋದೇನನ್ನಾಗಲೀ ಬರೆಯೋದಾಗದಿದ್ದರೆ ಹಾಗೆ ಬರೆದವುಗಳನ್ನು ಓದಿ ಅವುಗಳನ್ನು ಪುರಸ್ಕರಿಸುವುದೇ ಮೇಲಲ್ಲವೇ?

***

ಈ 'ಅಂತರಂಗ'ದಲ್ಲಿ ಬೇಕಾದಷ್ಟು ದ್ವಂದ್ವಗಳು ಹೊರಬಂದಿವೆಯೇ ವಿನಾ ಯಾರ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರವೇನೂ ಈವರೆಗೆ ಸಿಕ್ಕಂತೆ ಕಂಡುಬಂದಿಲ್ಲ. ಕೆಲವು ಲೇಖನಗಳಂತೂ ಒಣಗಿದ ಗರಟೇ ಚಿಪ್ಪನ್ನು ತುಕ್ಕು ಹಿಡಿದ ಕೆರೆಮಣೆ ಮೇಲೆ ಹಾಕಿ ತಿಕ್ಕಿದ ಹಾಗೆ ಮೊದಲಿನಿಂದ ಕೊನೇವರೆಗೆ ಒಂದೇ ರಾಗವನ್ನು ಹೊರಡಿಸಿಕೊಂಡು ಬಂದಿವೆ. ಆದರೆ ಈ ಲೇಖನಗಳನ್ನು ಬರೆಯುವುದರ ಮೂಲ ಉದ್ದೇಶ ಈವರೆಗೆ ಜೊತೆ ಸೇರಿದ ಕೆಲವರಿಗೆ ಗೊತ್ತು - ಸೋಮಾರಿತನವನ್ನು ಹೋಗಲಾಡಿಸುವುದು, ಬರೆಯುವ ಶಿಸ್ತನ್ನು ಬೆಳೆಸಿಕೊಳ್ಳುವುದು ಹಾಗೂ ನನ್ನದೇ ಆದ ಒಂದು ಅಸ್ತಿತ್ವವನ್ನು ಗುರುತಿಸಿಕೊಳ್ಳುವುದು. ನನ್ನಲ್ಲಿನ ಸೋಮಾರಿತನವೆನ್ನುವುದನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳಲಾಗದಿದ್ದರೂ ವಿಶ್ವ ಸೋಮಾರಿಗಳ ಸಂಘದ ಅಧ್ಯಕ್ಷನಿಗಿರಬೇಕಾದ ಯೋಗ್ಯತೆಗಳು ನನ್ನಲ್ಲಿಲ್ಲದಿರುವುದರಿಂದ ಆ ಹುದ್ದೆಗೆ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿಯಾಗಿದೆ. ಮೂವತ್ತು ನಿಮಿಷಗಳಲ್ಲಿ ಇದ್ದಬದ್ದದ್ದನ್ನೆಲ್ಲ ಕಕ್ಕಿಕೊಳ್ಳುವುದನ್ನು ಬರೆಯುವ ಶಿಸ್ತು ಎಂದು ಸಾಧಿಸಿಕೊಂಡರೆ ಅದೂ ಹೆಚ್ಚೂ ಕಡಿಮೆ ಸಿದ್ಧಿಸಿದಂತೆಯೇ. ಇನ್ನು ನನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದೆನೆಯೇ ಎಂದು ಯೋಚಿಸಿಕೊಂಡರೆ... 'ಈ ಹಾಳು ಬರಹಗಳೇನು ನನ್ನ ಅಸ್ತಿತ್ವವನ್ನು ಗುರುತಿಸುವುದು?' ಎಂದು ನನ್ನ ಹಾಗೂ ಈ ಕಂಪ್ಯೂಟರ್ ಸ್ಕ್ರೀನಿನ ನಡುವಿನ ಅವಕಾಶದಲ್ಲಿ ಈವರೆಗೆ ಬರೀ ಧ್ವನಿಯಿಂದಷ್ಟೇ ಹೆದರಿಸುತ್ತಿದ್ದ ಚೀತ್ಕಾರಗಳಿಗೆ ಸ್ವಲ್ಪ ಸ್ವಲ್ಪ ಮುಖವೂ ಮೂಡತೊಡಗಿರುವುದು ಸ್ವಷ್ಟವಾಗಿದೆ.

ನಿಖರವಾಗಿ ವ್ಯವಹರಿಸೋ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ದೂರ ಬಂದು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕೈ ಹಿಡಿದುಕೊಂಡಮೇಲೆ ಬರೀ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನಾಡುವುದನ್ನು ಪೋಷಿಸಿಕೊಂಡು ಬರುವಂತೆ ಮಾಡುತ್ತಿರುವ ನನ್ನ ನೆರೆಹೊರೆಗೆ ನಮಿಸುತ್ತಾ, ಅಂತರಂಗದಲ್ಲಿ ಬೇಕಾದಷ್ಟು ಸಾರಿ ಈ ಹಿಂದೆ ಹೇಳಿದಂತೆ ಈಗಲೂ ಹೇಳುತ್ತೇನೆ - ನೋಡೋಣ, ಇದು ಎಲ್ಲಿಯವರೆಗೂ ಬರುತ್ತೋ ಎಂದು!

Thursday, July 19, 2007

ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

ಎಷ್ಟೋ ಬಾರಿ ಅನ್ಸಲ್ವಾ ನಾವೆಲ್ಲಾ ಬೆಳೀತಾ ಬೆಳೀತಾ ನಮ್ ನಮ್ ಮುಗ್ಧತೆನಾ ಕಳ್ಕೊತೀವಿ ಅಂತ? ಮಕ್ಕಳ ಹಾಗೆ ಇರಬೇಕಿತ್ತಪಾ ಮನಸ್ಥಿತಿ, ಈ ಪ್ರಬುದ್ಧತೆ, ವಿಚಾರವಂತಿಕೆ ಅನ್ನೋದೆಲ್ಲಾ ಅವರವರಲ್ಲಿರೋ ಮುಗ್ಧತೆಯನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ಇನ್ನೇನೋ ಒಂದನ್ನ ತಂದು ಕೂರಿಸೋ ಪ್ರಭೃತಿಗಳು ಅನ್ಸಲ್ವಾ?

ಇವತ್ತು ನಾವೆಲ್ಲಾ ಆಫೀಸ್ನಲ್ಲಿ ಒಟ್ಟಿಗೇ ಮುಂಜಾನೆ ಕೆಫೆಟೇರಿಯಾಕ್ ಹೋಗ್ತಾ ಇದ್ವಿ, ಎಲ್ರೂ ಸಾವಕಾಶವಾಗಿ ನಡೀತಾ ಇದ್ರೆ, ನಾನೊಬ್ನು ಯಾವ್ದೋ ಘನಕಾರ್ಯ ಕಡಿದು ಹಾಕೋದಕ್ಕಿದೆ ಎನ್ನೋ ಹಾಗೆ ಅವಸರದಲ್ಲಿ ಮಹಡಿ ಮೆಟ್ಟಿಲುಗಳನ್ನ ಇಳೀತಾ ಇದ್ದೆ, ನನ್ನ ಸಹೋದ್ಯೋಗಿ ಒಬ್ಬನು ಕೇಳೇ ಬಿಟ್ಟ,

'ಏನಯ್ಯಾ ನೀನು ಅರ್ಜೆಂಟಿನಲ್ಲಿರೋ ಹಾಗಿದೆ?!'

ಅದಕ್ಕುತ್ತರವಾಗಿ ನಾನೆಂದೆ, 'ನೋಡು, ನೀನಗೂ ಮೂವತ್ತು ವರ್ಷ ದಾಟಿದ ಮೇಲೆ, ದಿನದ ಇಪ್ಪತ್ತ್ ನಾಲ್ಕು ಘಂಟೆಗಳು ಸಾಕೋದಿಲ್ಲ ಅಂತ ಯಾವಾಗ ಅನ್ಸುತ್ತೆ, ಆಗ ಎಕ್ಸರ್‍ಸೈಜ್ ಮಾಡೋಕೆ ಪುರುಸೊತ್ತು ಸಿಗೋದಿಲ್ಲ, ಅದರ ಬದಲಿಗೆ ಎಲ್ಲಿ ಹೋದ್ರೂ ಬಂದ್ರೂ ಈ ರೀತಿ ಅವಸರದಲ್ಲಿ ಓಡಾಡಿಕೊಂಡಿದ್ರೆ ಒಂದಿಷ್ಟು ಹಾರ್ಟ್ ರೇಟಾದ್ರೂ ಜಾಸ್ತಿ ಆಗಿ ಇನ್ನೂ ಸ್ವಲ್ಪ ದಿನ ಜಾಸ್ತಿ ಬದುಕ್‌ಬೋದು...'

ಎಲ್ಲರೂ ನಕ್ಕರೂ, ನಾನೂ ನಕ್ಕು ಮತ್ತೆ ಮುಂದುವರೆಸಿದೆ,

'ಈ ದೊಡ್ಡ ಮನುಷ್ಯರೆಲ್ಲಾ ಸೂಟ್ ಯಾಕ್ ಹಾಕ್ಕೊಂಡಿರ್ತಾರೆ ಗೊತ್ತಾ, ಅವರು ಯಾವಾಗ್ ನೋಡಿದ್ರೂ ಮುಕುಳಿಗೆ ಬೆಂಕಿ ಬಿದ್ದ ಹಾಗೆ ತಿರುಗಾಡ್‌ತಿರ್ತಾರೆ ಅನ್ನೋದ್ ಗೊತ್ತೇ ಇದೆ...'

ಆ ಕಡೆಯಿಂದ ಏನೂ ಉತ್ರ ಬರಲಿಲ್ಲ,

'ಈ ಬೇಸಿಗೆಯಲ್ಲಿ ಸೂಟ್ ಹಾಕ್ಕೊಂಡ್ ವೇಗವಾಗಿ ಓಡಾಡೋದೂ ಒಂದೇ, ಕೈಯಲ್ಲಿ ಐದು ಪೌಂಡ್ ಡಂಬೆಲ್ಲ್ ಹಿಡಿದುಕೊಂಡ್ ಜಾಗ್ ಮಾಡೋದೂ ಒಂದೆ...'

ಹೀಗೇ ಟೈಮ್ ಸಿಕ್ಕಾಗ ಅಲ್ಲಲ್ಲಿ ಸಣ್ಣ ಪುಟ್ಟ ನಗೆ ಚಾಟಿಕೆ ಹಾರಿಸಿಕೊಂಡು ಕಾಲ ಕಳೀತಿರ್ತೀನಿ - ಮತ್ತಿನ್ನೇನ್ ಮಾಡೋದು, ನಮ್ಮಂತಹವರಿಗೆ ಆಫೀಸೇ ಬದುಕು, ಬದುಕೇ ಆಫೀಸ್ ಆಗಿರೋವಾಗ, ಯಾವಾಗ್ ನೋಡಿದ್ರೂ ಎಲ್ಲರೂ ಒಂದಲ್ಲಾ ಒಂದು ಸಂದಿಗ್ಧದಲ್ಲಿ ಸಿಕ್ಕೊಂಡೇ ಇರೋವಾಗ, ಸ್ಟ್ರೆಸ್ ಅನ್ನೋದು ದಿನದ ಅವಿಭಾಜ್ಯ ಅಂಗವಾದಾಗ...

ಶುಕ್ರವಾರ ಬಂತೂ ಅಂತಂದ್ರೆ 'ಓಹ್, ಇನ್ನೇನು ವೀಕ್ ಎಂಡ್ ಬಂತೂ...' ಅಂತ ಎಲ್ಲರ ಕಣ್ಣರಳುತ್ತೆ, ವಾರಾಂತ್ಯದಲ್ಲಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಮಾಡೋಣ ಅಂತ ಏನೇನೆಲ್ಲ ತಲೆಯೊಳಗೆ ಬಂದು ಕೊರೆಯೋಕ್ ಶುರು ಹೊಡೀತಿರ್ತಾವೆ. ಶನಿವಾರ ಎದ್ದು ಮುಖತೊಳೆದು ತಿಂಡಿ ತಿಂದಂಗ್ ಮಾಡಿ, ಕಾಫಿ ಕುಡದಂಗ್ ಮಾಡಿ ಇನ್ನೇನು ಮೈ ಮುರೀ ಬೇಕು ಅನ್ನೋಷ್ಟರಲ್ಲಿ ಮಧ್ಯಾಹ್ನವಾಗಿ ಹೋಗುತ್ತೆ. ಒಂದಿಷ್ಟು ಟಿವಿ ರಿಮೋಟಿನ ಮೇಲೆ ಕೈ ಆಡ್ಸಿ ಟಿವಿ ನೋಡ್ದಂಗ್ ಮಾಡಿ, ಮನೆ ಕ್ಲೀನ್ ಮಾಡ್ಕೊಂಡ್ ಸಂಜೆ ಶಾಪ್ಪಿಂಗ್ ಮುಗಿಸಿ ಕಾಫಿ ಕುಡಿದು, ರಾತ್ರೆ ಊಟಾ ಮುಗಿದು ಇನ್ನೂ ಮಲಗಿರಲ್ಲ ಆಗ್ಲೇ ಭಾನುವಾರ ಬಂದ್ ಹೋಗ್‌ಬಿಡುತ್ತೆ. ಒಡಹುಟ್ಟಿದವರು, ಪೋಷಕರಿಗೆ ಒಂದಿಷ್ಟ್ ಫೋನ್ ಮಾಡಿ 'ಚೆನ್ನಾಗಿದೀರಾ' ಅಂತ ಕೇಳೋ ಹೊತ್ತಿಗೆ, ಡ್ರೈಯರ್ರ್‌ನಲ್ಲಿರೋ ಬಟ್ಟೇ ತೆಗೆದು ಮಡಚಿ ಇಡೋ ಹೊತ್ತಿಗೆಲ್ಲಾ ಭಾನುವಾರ ಕಥೆ ಗೊಳಂ - ಮತ್ತೆ ಸೋಮವಾರದ ಹಾಡು. ಐದು ದಿನದ ವಾರದ ದಿನಗಳು ವೇಗವಾಗಿ ಹೋಗ್ತಾವೋ, ಎರಡು ದಿನಗಳ ವಾರಾಂತ್ಯ ವೇಗವಾಗಿ ಹೋಗುತ್ತೋ ಅನ್ನೋದಕ್ಕೆ ಯಾವ ಸೂತ್ರವನ್ನೂ ಯಾರೂ ಇನ್ನೂ ಕಂಡು ಹಿಡಿದ ಹಾಗಿಲ್ಲ.

ಹಿಡಿದ ಕೆಲಸವನ್ನು ಟೈಮಿಗೆ ಸರಿಯಾಗಿ ಮುಗಿಸಬೇಕೋ, ಅಥವಾ ಟೈಮ್ ಎಷ್ಟು ತೊಗೊಂಡ್ರೂ ಪರವಾಗಿಲ್ಲ ಹಿಡಿದ ಕೆಲಸವನ್ನು ಸರಿಯಾಗಿ ಮಾಡಬೇಕೋ ಅನ್ನೋ ಆಲೋಚನೆಗಳಲ್ಲಿ ತೊಡಗಿಕೊಂಡರೆ ಟೈಮ್ ಹೋಗಿದ್ದೇ ಗೊತ್ತಾಗಲ್ಲ. ಒಂದ್ ಕಡೆ ಘಂಟೆಯ ಬೆನ್ನು ಹತ್ತಿ ಎಲ್ಲರೂ ಒಂದಲ್ಲಾ ಒಂದು ಸ್ಕೆಡ್ಯೂಲ್‌ನಲ್ಲಿ ತೊಡಗಿಕೊಂಡಿರ್ತಾರೆ, ಅವರಿಗೆ ಅವರ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಇನ್ನೊಂದ್ ಕಡೆ ಯಾವ್ದಾದ್ರೂ ಒಂದ್ ಪ್ರಶ್ನೆಗೆ ಯೋಚಿಸಿ ಉತ್ರ ಹೇಳೋದಕ್ಕೆ ಪುರುಸೊತ್ತು ಕೊಡದ ಹಾಗಿನ ಇವತ್ತಿನ ಮೀಟಿಂಗ್‌ನ ವಾತಾವರಣ, ನೀವು ಸರಿಯಾಗಿ ಆಲಿಸಬೇಕು (listening skills) ಅನ್ನೋದು ಒಂದು ಕಡೆ, ಹಾಗೆ ಇನ್ನೊಬ್ಬರ ಪ್ರಶ್ನೆ ಅಥವಾ ಮಾತನ್ನು ಕೇಳುವಾಗ ನಮ್ಮ ಉತ್ತರವನ್ನು ಫಾರ್ಮುಲೇಟ್ ಮಾಡದೇ ಹೋದ್ರೆ ಈ ವ್ಯವಸ್ಥೆಗೆ ತಕ್ಕಂತೆ ಸ್ಪಂದಿಸೋದೇ ಕಷ್ಟವಾಗಿ ಹೋಗುತ್ತೆ. ಎಲ್ಲವೂ ಪಟ್ಟನೆ ಆಗಿ ಬಿಡಬೇಕು ಎಂದು ಯಾರೋ ಹೊರಡಿಸಿದ ಕಾಯಿದೆ ಬೇರೆ ಕೇಡಿಗೆ.

'My door is always open for you...' ಎನ್ನುವ ಬಾಸ್‌ನ ಬಾಸಿನ ಡೋರು ಯಾವತ್ತೂ ಗುಪ್ತ ಮೀಟಿಂಗ್‌ಗಳನ್ನು ಪುರಸ್ಕರಿಸಿಕೊಂಡು ಮುಚ್ಚೇ ಇರುತ್ತೆ...'I have an open door policy...' ಎನ್ನುವ ವಾಕ್ಯ ಫಿಗರೇಟಿವ್ ಆಗಿ ಮಾತ್ರ ಬಳಕೆಗೆ ಬರುತ್ತೆ...ನೀವು ಹೇಳಿದ್ದನ್ನೆಲ್ಲ ಕೇಳ್ತೀವಿ ಅನ್ನೋ ಜನರೇ ತಮ್ಮ ಕಿವಿಗೆ ಬಿದ್ದಿದ್ದೆಲ್ಲವನ್ನೂ ಕೇಳಿಸಿಕೊಳ್ಳದೇ ಇರೋರು, ನಾಯಕತ್ವ ಅನ್ನೋ ಹೆಸರಿನಲ್ಲಿ ತಮ್ಮ ಮನಸಲ್ಲಿದ್ದದ್ದೆನ್ನೆಲ್ಲ ಮುಕ್ತವಾಗಿ ಹಂಚೋರು.

ಹಾಸ್ಯದ ಮೊರೆ ಹೋಗೋರು ಜೀವ್ನಾನ ಗಂಭೀರವಾಗಿ ನೋಡೋದಿಲ್ಲ ಅಂತ ಯಾರ್ ಅಂದೋರು, ಈ ಬ್ಯೂರೋಕ್ರಸಿಯಿಂದ ತುಂಬಿರೋ ಅಫೀಸ್ ಜೀವ್ನಾನ ತುಸು ಹಾಸ್ಯದಿಂದ ನೋಡ್ದೇ ಹೋದ್ರೆ ಎಂತೋನ್ ಹೃದಯಾನಾದ್ರೂ ನಿಂತೇ ಹೋಗುತ್ತೆ! ಇನ್ನ್ ಮೇಲಾದ್ರೂ ತಮ್ಮನ್ನು ತಾವು ಅದೆಲ್ಲೋ ಕಳೆದುಕೊಂಡು ಅವಸರದಲ್ಲಿ ಓಡಾದೋರ್ ಕಂಡ್ರೆ ಸ್ವಲ್ಪ ದಾರಿ ಬಿಡ್ತೀರಾ ತಾನೆ? ಜೊತೆಗೆ ಅಂತಹವರೇನಾದ್ರೂ ಜೋಕ್ ಹೇಳಿದ್ರೆ ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

Monday, July 16, 2007

ನಮ್ಮೊಳಗಿನ ಧ್ವನಿ

ಇವತ್ತು 92.3 ಯನ್ನು ಕೇಳ್ಕೊಂಡ್ ಆಫೀಸ್ನಿಂದಾ ಬರ್ತಾ ಇರ್ಬೇಕಾದ್ರೆ ಯಾವ್ದೋ ಒಂದು ಟ್ಯೂನ್ ಕೇಳಿ ದೀವಾನಾ ಹಿಂದೀ ಸಿನಿಮಾದ 'ಫಾಯಾಲಿಯಾ ಹೋ ಹೋ ಹೋ ಹೋ' ಹಾಡು ನೆನಪಿಗೆ ಬಂತು. ರೆಡಿಯೋದಲ್ಲಿ ಬರ್ತಾ ಇದ್ದ ಹಾಡಿನ ಧ್ವನಿಯನ್ನು ಕಡಿಮೆ ಮಾಡಿ, ನಾನು ಫಾಯಲಿಯಾ...ಟ್ಯೂನ್ ಗೆ ಗಂಟು ಬಿದ್ದೆ, ನನಗೇನೂ ಆ ಹಾಡಿನ ಸಾಹಿತ್ಯ ಬರದಿದ್ದರೂ ಗಟ್ಟಿಯಾಗಿ ಗುನುಗುವಷ್ಟು ಅದರ ರಾಗ ಮಾತ್ರ ಬರುತ್ತಿದ್ದುದರಿಂದ ದಾರಿಯಲ್ಲಿ ಸ್ವಲ್ಪ ಹೊತ್ತು ಟೈಮ್ ಪಾಸಾಗಿತ್ತು.

ನನಗೆ ಮೊದಲಿಂದಲೂ ಯಾವುದೇ ಹಾಡನ್ನಾದರೂ ಅದರ ಮೂಲ ಗಾಯಕರ ಧ್ವನಿಯಲ್ಲಿ ಕೇಳಿ ಅದನ್ನನುಕರಿಸಿ ಪ್ರಯತ್ನಿಸೋ ಒಂದು ಕೆಟ್ಟ ಅಭ್ಯಾಸ, ಆ ಅಭ್ಯಾಸ ಬಲಕ್ಕೆ ತಕ್ಕಂತೆ ಕುಮಾರ್ ಸಾನು ಧ್ವನಿಯನ್ನು ಅನುಕರಿಸಲು ಹೋದ ನನಗೆ ಏನು ಮಾಡಿದರೂ, ಎಷ್ಟು ಪ್ರಯತ್ನ ಪಟ್ಟರೂ ಮೊದ ಮೊದಲು ಕುಮಾರ್ ಸಾನು ಥರವೇ ಧ್ವನಿಯಾಗಿ ಮೇಲೆದ್ದರೂ ಮುಂದಿನ ಸ್ವರಗಳು ಪಕ್ಕಾ ಸೌತ್ ಇಂಡಿಯನ್ನ್ ಕ್ಲಾರಿಟಿಯಲ್ಲಿ ಹೊರಬರುತ್ತಿವೆ! ಮೊದಲೇ ಲಿರಿಕ್ಸ್ ಬರೋದಿಲ್ಲ, ಇನ್ನೂ ಧ್ವನಿಯೂ ಬಾಯಿಗೆ ಬಂದಂತಾಗಿ ಹೋಗಿ ಯಾವೊಂದು ವಿಷಯ-ವಸ್ತು-ಪದವನ್ನು ಪದೇಪದೇ ಹೇಳಿಕೊಂಡು ಬಂದರೆ ಅದು ತನ್ನ ಅರ್ಥವನ್ನು ಹೇಗೆ ಕಳೆದುಕೊಳ್ಳುವುದೋ ಅಂತೆಯೇ ಈ ದಿನಕ್ಕೆ ಫಾಯಲಿಯಾ ಹಾಡಿನಲ್ಲಿ ಸತ್ವವೆಲ್ಲವೂ ಇಂಗಿ ಹೋಗಿತ್ತು.

ಮೊದಮೊದಲೆಲ್ಲಾ ಕಿಶೋರ್ ಕುಮಾರ್ ಅನುಕರಿಸುತ್ತಾರೆ ಎಂದುಕೊಂಡು ಸುದ್ದಿ ಹುಟ್ಟಿಸಿದ ಕುಮಾರ್ ಸಾನೂದೂ ಈಗೊಂದು ಭಿನ್ನ ಧ್ವನಿ, ಅಂತಹ ಭಿನ್ನ ಧ್ವನಿಯನ್ನು ಅನುಕರಿಸೋಕ್ ಹೋಗೋ ನನ್ನಂಥವರದ್ದು ಹಲವಾರು ಧ್ವನಿಗಳು.

***

ಉದಯಾದಲ್ಲಿ ಆಪ್ತಮಿತ್ರದ 'ಇದು ಹಕ್ಕೀ ಅಲ್ಲಾ...ಬಾಲಾ ಇದ್ರೂನೂ ಕೋತೀ ಅಲ್ಲಾ...' ಎಂದು ಹಾಡೊಂದು ತೂರಿಕೊಂಡು ಬರುತ್ತಿತ್ತು. ವಿಷ್ಣುವರ್ಧನ್, ಪ್ರೇಮಾ, ರಮೇಶ್ ಹಾಗೂ ಇನ್ನಿತರ ಪರಿಚಿತರ ಮುಖಗಳ ಸುಂದರವಾದ ದೃಶ್ಯಗಳು, ಯಾವೊಂದು ಕನಸೊಂದರ ಸೀಕ್ವೆನ್ಸಿನಂತೆ ಬಣ್ಣಬಣ್ಣದ ಗಾಳಿಪಟಗಳು, ಎಲ್ಲವೂ ಸರಿ...ಏನೋ ಎಡವಟ್ಟಿದೆ ಇದರಲ್ಲಿ ಎಂದು ಯೋಚಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಿಂದೊಮ್ಮೆ ವಿಶೇಷವಾದ ಧ್ವನಿಗಳ ಬಗ್ಗೆ ಬರೆದದ್ದು ನೆನಪಿಗೆ ಬಂತು, ಈ ಹಾಡನ್ನೂ ಉದಿತ್ ನಾರಾಯಣ್ ಹಾಡಿರೋದು ಎಂದು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ!

ನಮ್ಮದೇ ಒಂದು ವಿಶೇಷವಾದ ಧ್ವನಿ, ಅದಕ್ಕಿಂತಲೂ ಹೆಚ್ಚು ಒಂದು ವಿಶೇಷವಾದ ಪರಂಪರೆ - ಒಂದು ಸಾಧಾರಣವಾದ ಗಾಳಿಪಟದಂತಹ ವಿಷಯವಿದ್ದಿರಬಹುದು, ಅಥವಾ ಅದರ ಹಿನ್ನೆಲೆಯಲ್ಲಿ ಮರ್ಕಟವನ್ನು ಪ್ರತಿಬಿಂಬಿಸೋ ಮನಸ್ಸಿರಬಹುದು, ಅಥವಾ ನೋಡುಗ/ಕೇಳುಗರಿಗೆ ಇನ್ನೂ ಎನನ್ನೋ ಆಲೋಚಿಸುವಂತೆ ಮಾಡುವ ಪ್ರಯತ್ನವಿರಬಹುದು. ಇವೆಲ್ಲ ಪ್ರಯತ್ನಗಳಿಗೊಂದು ನಮ್ಮೊಳಗಿನ ಧ್ವನಿಯೇ ಇಲ್ಲದಂತಾಗಿ ಹೋದರೆ ಏನೋ ಸರಿ ಇಲ್ಲ ಎಂದು ಅನ್ನಿಸೋದು ನನ್ನಂತಹವರಿಗೆ ಸಹಜ, ಅದೂ ಇಂತಹ ಧ್ವನಿಯ ಹಿಂದೆಯೇ ಗಿರಕಿ ಹೊಡೆಯುತ್ತಾ ನಿಲ್ಲಬಹುದಾದ ನನ್ನ ತರ್ಕ ಅಲ್ಲಿಂದ ಮುಂದೆ ಸರಿಯದಿರಬಹುದು.

ಎಸ್.ಪಿ.ಬಿ. ಅದೆಷ್ಟೋ ಸಾವಿರ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದರೂ ಸಹ ಅವರು ಕನ್ನಡ ಮಾತಾಡೋದನ್ನ ಕೇಳಿದಾಗ ಅವರು ನಮ್ಮವರು ಎಂದೆನಿಸೋದಿಲ್ಲ, ಮುದ್ದಿನ ಮಾವ ಸಿನಿಮಾದಲ್ಲೂ ಸಹ ಅವರ ಮೃದುವಾದ ಮಾವನ ಪಾತ್ರದ ಪ್ರಯತ್ನ ಚೆನ್ನಾಗೇನೋ ಇದೆ, ಆದರೆ ಭಾಷೆಯ ವಿಚಾರದಲ್ಲಿ ಅವರು ಹೊರಗಿನವರಾಗೇ ಉಳಿದುಬಿಟ್ಟರು. ಎಸ್.ಪಿ.ಬಿ. ಧ್ವನಿ ಉತ್ತರ ಭಾರತದವರಂತೆ (ಸೋನು ನಿಗಮ್, ಉದಿತ್ ನಾರಾಯಣ್, ಕುಮಾರ್ ಸಾನೂ) ವಿಶೇಷವಾಗೇನೂ ಇರದಿದ್ದರೂ, ಅವರ ಕನ್ನಡ ಹಾಡುಗಳು ನಮ್ಮೊಳಗಿನ ಧ್ವನಿಯಂತೆಯೇ ಇವೆ, ಅವರ ಕನ್ನಡ ಮಾತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲದರಲ್ಲಿ ಅವರ ಪ್ರಯತ್ನ ಶ್ಲಾಘನೀಯ - ಬೆಂಕಿಯಬಲೆಯ ಚಿತ್ರದ ಹಾಡುಗಳನ್ನು ಅನಂತ್‌ನಾಗ್ ಅವರೇ ಹೇಳಿದ್ದಾರೇನೋ ಎನ್ನುವಂತೆ ಧ್ವನಿಯಲ್ಲಿ ವೇರಿಯೇಷನ್ನುಗಳನ್ನು ಹುಟ್ಟಿಸಿ, ಅದೇ ಟೆಕ್ನಿಕ್‌ ಮೂಲಕ ಶಿವರಾಜ್‌ಕುಮಾರ್ ಅವರಿಂದ ಹಿಡಿದು, ರಾಜ್‌ಕುಮಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲ ನಾಯಕರಿಗೆ ಅವರು ಧ್ವನಿಯಾಗಿದ್ದಾರೆ - ಈ ಒಂದು ಕಾರಣವೇ ಇದ್ದಿರಬೇಕು ಸಂಗೀತ ನಿರ್ದೇಶಕರು 'ಬಾಲೂ...ಬಾಲೂ' ಎಂದು ಅವರನ್ನು ಅಂಗಾಲಾಚಿಕೊಳ್ಳುವುದು, ಹಾಡುಗಳ ಧ್ವನಿ ಸುರುಳಿಯನ್ನು ತೆಗೆದುಕೊಂಡು ಅವರ ಮನೆ ಮುಂದೆ ಸಾಲು ನಿಲ್ಲುವುದು.

***

ಬಾಂಬೆ, ಮದ್ರಾಸು, ಹೈದರಾಬಾದು ದೊರೆಗಳನ್ನು ಪೋಷಿಸಿ ಕೈ ಹಿಡಿದು ಕನ್ನಡ ಸಿನಿಮಾಕ್ಕೆ ನಡೆಸಿಕೊಂಡು ಬರುವುದರ ಬದಲು ನಮ್ಮೊಳಗಿನ ಪ್ರತಿಭೆಗಳಿಗೆ ಜೀವ ತುಂಬಿ ಪೋಷಣೆ ನೀಡಿದ್ದರೆ...ರವಿಚಂದ್ರನ್ ಹಂಸಲೇಖರನ್ನು ಪರಿಚಯಿಸಿದ ಹಾಗೆ...ನಮ್ಮಲ್ಲಿಯೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಎನ್ನುವುದನ್ನು ನಾವು ಯಾವತ್ತೋ ಸಾಧಿಸಿ ತೋರಿಸಬಹುದಿತ್ತು.

Friday, July 13, 2007

ಸುಮ್ನೇ ತಲೇ ತಿಂತಾರ್ ನೋಡಿ ಸಾರ್...

ಏನಾದ್ರೂ ಒಂದಿಷ್ಟು ಕುಟ್ಟಿ ಬಿಸಾಕೋಣಾ ಅಂತಂದು ಈ ಕಂಪ್ಯೂಟ್ರು ಶುರು ಮಾಡೋಕ್ ಹೋದ್ರೇ ಬಸವನ ಹುಳೂನಾದ್ರೂ ಬೇಕು, ಈ ಕಂಪ್ಯೂಟರ್ರ್ ಬ್ಯಾಡಾ, ಸ್ಲೋ ಅಂದ್ರೆ ಸ್ಲೋ...ಮೊದಲೇ ಗೊಲ್ಲೀ ಈಗಂತೂ ಹಡದಾಳೇ ಅಂತಾರಲ್ಲಾ ಹಾಗೆ ಇವತ್ತು ಅದೇನೋ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ದೇನೆ ಅಂತ ಮೆಸ್ಸೇಜ್ ಬೇರೆ ಕೊಡುತ್ತೆ...ಈ ವೈರಸ್ಸೂ, ಪ್ಯಾಚೂ ಇವುಗಳೆಲ್ಲಾ ನಾವ್ ನಾವ್ ಸೃಷ್ಟಿಸಿಕೊಂಡಿರೋ ಟೆಂಪೋರರಿ ಮೆಂಟಲ್ ಸ್ಯಾಟಿಸ್‌ಫ್ಯಾಕ್ಷನ್ ಅಷ್ಟೇ ಅನ್ಸಲ್ಲಾ ಎಷ್ಟೊಂದ್ ಸರ್ತಿ? ಇವೆಲ್ಲಾ ಎಲ್ಲೀವರೆಗೆ ಚೆಂದ ಅಂದ್ರೆ ಅದ್ಯಾವ್ದೋ ಸಿನಿಮಾದಲ್ಲಿ ತೋರ್ಸೋ ಹಾಗೆ ಇವತ್ತಲ್ಲಾ ನಾಳೆ ಯಾವನೋ ಒಬ್ನು ಎಲೆಕ್ಟ್ರಿಕ್ ನೆಟ್‌ವರ್ಕ್ ಅಥವಾ ಕೇಬಲ್ ನೆಟ್‌ವರ್ಕ್ ಮೂಲ್ಕಾ ವೈರಸ್ ಕಳಿಸೋದನ್ನ ಕಂಡ್ ಹಿಡೀತಾನೇ ಅಲ್ಲೀವರೆಗೆ ಮಾತ್ರಾ ಅಷ್ಟೇ. ನನಗೆ ಎಷ್ಟೋ ಸರ್ತಿ ಅನ್ಸಿದೆ, ಈ ಅಂಟೀ ವೈರಸ್ ಕಂಪನಿಗಳೇ ವೈರಸ್ಸುಗಳ್ನ ಬರೀತಾವೇ ಅಂತ...ಯಾಕಂದ್ರೆ ಅವ್ರು ಬಿಸಿನೆಸ್ಸಲ್ಲಿ ಇರೋದ್ ಬ್ಯಾಡ್ವೇ? ಹಿಂಗಂದ್ ಕೂಡ್ಲೇ ನಮ್ ಕಡೇ ಇರೋ ಒಂದು ಪ್ರಚಲಿತ ಜೋಕ್ ನೆನಪಿಗೆ ಬಂತು...

'ನಿಮಗೆ ಹುಷಾರಿಲ್ದೇ ಇದ್ರೆ ಡಾಕ್ಟ್ರ ಹತ್ರ ಹೋಗ್ಬೇಕು, ಯಾಕೇಂದ್ರೆ ಡಾಕ್ಟರ್ ಬದುಕೋದ್ ಬ್ಯಾಡ್ವೇ?
ಡಾಕ್ಟ್ರು ಔಷ್ಧಿ ಬರ್ಕೊಟ್ರೆ, ಮೆಡಿಕಲ್ ಸ್ಟೋರ್‌ಗೆ ಹೋಗ್ಬೇಕು, ಯಾಕೇಂದ್ರೆ ಮೆಡಿಕಲ್ ಸ್ಟೋರ್‌ನೋರ್ ಬದುಕೋದ್ ಬ್ಯಾಡ್ವೇ?
ಮೆಡಿಕಲ್ ಸ್ಟೋರ್‌ನೋರ್ ಔಷ್ಧಿ ಕೊಟ್ರೆ ಅದ್ನ ನೀವ್ ತೊಗೋಬೇಡಿ, ಯಾಕೇಂದ್ರೆ ನೀವ್ ಬದ್ಕೋದ್ ಬ್ಯಾಡ್ವೇ!'

ಈ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ನಾ, ಅಷ್ಟೋತ್ತಿಗ್ ತಗಳ್ಳಪ್ಪಾ ಮೈಕ್ರೋಸಾಫ್ಟ್‌ನೋನ್ ಶುರು ಮಾಡ್ಕೊಂಡಾ, ಅದೇನೋ ಪ್ಯಾಚ್ ಇನ್ಸ್ಟಾಲ್ ಅಂತ. ಅವನು ಐದು ನಿಮಿಷಾ ಕಂಪ್ಯೂಟರ್ರನ್ ಬಿಜಿಯಾಗಿಟ್ಟಿದ್ದೂ ಅಲ್ದೇ ಆಮೇಲೆ ಈಗಿನ್ನೂ ಶುರು ಮಾಡಿರೋ ಕಂಪ್ಯೂಟರ್ರನ್ನ ರೀ ಸ್ಟಾರ್ಟ್ ಮಾಡು ಅಂತ ಆದೇಶ ಬೇರೆ ಕೊಡ್ತಾನೆ! ಎಲ್ಲಾ ನನ್ನ ಮಕ್ಳೂ ಇಲ್ಲಿ ಆದೇಶ ಕೊಡೋರೇ...CALL NOW...1-800 ಅಂದ್‌ಕೊಂಡ್ ಟಿವಿ ನಲ್ಲಿ ನಂಬರ್‌ಗಳನ್ನ ಪ್ರವರ ಹೇಳೋ ಥರ ಒದರಿಕೊಂಡ್ ಹೋಗ್ತಾರೆ, Talk to your doctor ಅಂತ ಏನೇನೋ ಔಷಧಿಗಳ್ನ ತೋರಿಸ್ತಾರೆ - ಇಲ್ದಿರೋ ಕಾಯ್ಲೆಗಳನ್ನೆಲ್ಲ ಹುಟ್ಟಾಕಿ...ಅಷ್ಟ್ ತಾಕತ್ತಿದ್ರೆ ಏಯ್ಡ್ಸ್‌ಗೆ ಔಷಧಿ ಕಂಡ್ ಹಿಡೀಲಿ...ನಾವ್ ಹೋಗೀ ಡಾಕ್ಟರ್‌ನ ಇಂಥಾ ಮಾತ್ರೆ ಔಷಧಿ ಕೊಡೀ ಅಂತ ಕೇಳೋದೋ ಅವ್ರೇ ನಮ್ ನಮ್ ಕಂಡೀಷನ್ನ್ ನೋಡೀ ಬರ್ದು ಕೊಡೋದೋ? ಎಲ್ಲಾರೂ ಆರ್ಡರ್ ಮಾಡೋರೇ ಇಲ್ಲಿ... ಬೆಳ್ಳಂ ಬೆಳಗ್ಗೆ ಶುರು ಹಚ್ಕೊಂಡ್ ಬಿಡ್ತಾರೆ...do that, do this ಅಂದ್‌ಕೊಂಡು...ದುಡ್ಡೂ, ಸಮಯಾ ಇವ್ರ ಅಪ್ಪ ತಂದ್ ಕೊಡ್ತಾನೆ.

ಹಂಗಂತ ನನ್ನದಾಗ್ಲೀ, ಈ ಲೇಖ್ನಾ ಓದ್ತಾ ಇರೋ ನಿಮ್ಮ್ ಕಂಪ್ಯೂಟರ್ರಾಗ್ಲೀ ಹಳೇದೂ, ಔಟ್ ಡೇಟೆಡ್ಡೂ ಅಂತ ನಾನ್ ಹೇಳ್ತಾ ಇಲ್ಲಾ...ಇದರಲ್ಲಿ ಬೇಕಾದಷ್ಟು ಜ್ಯೂಸ್ ಇನ್ನೂ ಇದೆ...ಒಂದು ಗಿಗ್ ಮೆಮೆರಿ ಇದ್ರೂ ಈ ನನ್ ಮಕ್ಳು ಪ್ರೋಗ್ರಾಮ್ ಎಲ್ಲಾ ಲಾಂಚ್ ಆಗೋಕೆ ಎಷ್ಟೊಂದ್ ಸಮ್ಯಾ ಬೇಕು...ಹಾರ್ಡ್‌ವೇರೂ, ಸಾಫ್ಟ್‌ವೇರೂ ಅಂತ ತುಂಬ್ ತುಂಬ್‌ಕೊಂಡು ತಲೇ ಎಲ್ಲಾ ಚಿಟ್ಟ್ ಹಿಡಿಯೋ ಹಾಗ್ ಮಾಡಿದ್ದ್ ಯಾರು? ಒಂದ್ ಕಾಲ್ದಾಲ್ಲಿ ಕೇವ್ಲಾ 166 MHz ಕಂಪ್ಯೂಟ್ರೂ ಬಳಸಿ ನ್ಯಾಸಾದೋರು ಚಂದ್ರಯಾನ ಮಾಡ್ಲಿಲ್ವೇ? ಇವತ್ತಿನ್ ಕಂಪ್ಯೂಟ್ರುಗಳಿರ್ಲಿ, ಈಗಿನ್ ಕಾಲದ್ ಕಾರ್‌ಗಳಲ್ಲಿ ಅದಕ್ಕಿಂತ ಹೆಚ್ಚು ಕಂಪ್ಯೂಟಿಂಗ್ ಪವರ್ ಇರೋವಾಗ...ಏನಾಗಿದೆ ನಮ್ ಹೊಸ ಹೊಸಾ ಕಂಪ್ಯೂಟರ್ರ್ ಗಳಿಗೆ ಅನ್ಸೋಲ್ಲಾ? ಇವರ್ದೆಲ್ಲಾ ದೊಡ್ಡದೊಂದು ಕಾನ್ಸ್‌ಪಿರಸಿ, ಅದ್ಯಾವನೋ ಮೂರ್ (Moore) ಅನ್ನೋನ್ ಅದೇಷ್ಟೋ ವರ್ಷದ ಹಿಂದೆ ಪ್ರಿಡಿಕ್ಟ್ ಮಾಡ್ಲಿಲ್ಲಾ ಕಂಪ್ಯೂಟಿಂಗ್ ಪವರ್ರ್ ಬಗ್ಗೆ, ಪ್ರಾಸೆಸಿಂಗ್ ಬಗ್ಗೆ? ಆದ್ರೂ ಇಲ್ಲಿನ ಮಾರ್ಕೆಟಿಂಗೇ ಮಾರ್ಕೆಟಿಂಗು...ದಿನದಿನ ಬಿಟ್ಟು ದಿನಾ ಹೊಸ ಹೊಸ ಕಂಪ್ಯೂಟರ್ ತೊಗೊಳೋಕೆ ಯಾರ್ ಕೊಟ್ತಾರೆ ರೊಕ್ಕಾನಾ? ವಿಂಡೋಸ್ ವಿಸ್ತಾನಾದ್ರೂ ಬರ್ಲಿ, ಪಿಸ್ತಾನಾದ್ರೂ ಬರ್ಲಿ (ಸ್ಟಾರ್ಟ್ ಆಗೋಕೇ, ಶಟ್‌ಡೌನ್ ಆಗೋಕೇ ಏನಿಲ್ಲಾ ಅಂದ್ರೂ ಐದ್ ಐದ್ ನಿಮಿಷಾ ತೊಗೊಳುತ್ತೇ ಅದ್ ಬೇರೆ ವಿಷ್ಯಾ) ನನ್ ಈಗಿರೋ ಕಂಪ್ಯೂಟರ್ರ್ ಬದ್ಲೀ ಮಾಡಲ್ಲಾ ಅಂತ ಹಠ ಹಿಡಿದು ಕುಳಿತಿರೋ ಕಂಪ್ನಿ, ಬಳಕೆದಾರರಿಗೆ ಎಲ್ಲಾ ಇನ್ನು ಮುಂದೆ ನಾವು ನಮ್ಮ್ ಪ್ರಾಡಕ್ಟನ್ನ ಸಪ್ಫೋರ್ಟ್ ಮಾಡಲ್ಲಾ ಅಂತ ಹೆದರ್ಸಿ ಹೊಸ ಹೊಸದನ್ನ ಮಾರೋದು...ಮನುಷ್ಯಾ ಅನ್ನೋನು ಮಂಗಳಗ್ರಹಕ್ಕೆ ರಾಕೇಟ್ ಕಳ್ಸಿ ವಾಪಾಸ್ ಕರೆಸಿಕೊಂಡಿದ್ದು ಸಾಧ್ಯಾ ಆದ್ರೂ ಇಪ್ಪತ್ತು ವರ್ಷದ ಹಿನ್ನೆಲೇನಲ್ಲಿ ಒಂದ್ ನೆಟ್ಟಗಿರೋ ಆಪರೇಟಿಂಗ್ ಸಿಸ್ಟಂ‌ನ ಹೊರಗ್ ತರಲಿಲ್ಲಾ ಅಂದ್ರೆ ಏನ್ ಹೇಳೋಣ!

ಈ ಎಲ್ಲಾರ್ದೂ ಒಂದೊಂದು user interfaceಸೂ...ಸೆಲ್ ಫೋನ್ ತಗಳ್ಳಿ (ಅದೊಂದ್ ಡಬ್ಬಾ ಅದ್ ಬೇರೆ ವಿಷ್ಯಾ) ಅಲ್ಲಿ ಅವನ್ದೇ ಒಂದು ಆದೇಶ...ಹಂಗ್ ಮಾಡೀ, ಹಿಂಗ್ ಮಾಡಿ ಅಂತ...ಒಂದ್ ಕಾಮನ್ ಸೆನ್ಸಿನ್ ವಿಷ್ಯಾ...ಸೆಲ್ ಫೋನ್ನಲ್ಲಿ ಬ್ಯಾಟರಿ ಇನ್ನೇನ್ ಖಾಲಿ ಆಗ್ತಾ ಇದ್ರೆ ಅನ್ನೋವಾಗ ಶಟ್ ಡೌನ್ ಆಗೋವಾಗ್ಲೂ ದೊಡ್ಡದಾಗಿ ಗ್ರಾಫಿಕ್ ತೋರ್ಸಿ, ಸೌಂಡ್ ಮಾಡ್ಕೊಂಡೇ ಸಾಯ್‌ಬೇಕಾ...ಅದರ ಬದ್ಲಿ ಬ್ಯಾಟರಿ ಕನ್ಸರ್ವ್ ಮಾಡಿ ಕೊನೇ ಪಕ್ಷಾ ಒಂದೇ ಒಂದು ನಿಮಿಷಾ ಕಾಲ್ ಆದ್ರೂ ಮಾಡೋ ಹಾಗಿದ್ರೆ ಅನ್ಸಲ್ಲಾ?...ಈ ನನ್ ಮಕ್ಳು ಸೆಲ್ ಫೋನ್ ತೆಗೊಂಡಕ್ಷಾಣ ದಿನಾ ಬೆಳಗ್ಗೆ ಎದ್ದು ಸ್ಕ್ರೀನ್ ಆನ್ ಮಾಡಿದ್ರೆ ಇವ್ರ ಕಂಪನೀ, ಲೋಗೋಗಳ ಹೆಸರನ್ನ್ಯಾಕ್ ನೋಡ್ಬೇಕ್ ನಾವು...ಇವರಿವರ ಬ್ರ್ಯಾಂಡಿಂಗ್ ಕಟ್‌ಕೊಂಡ್ ನಮಿಗೇನಾಗ್ಬೇಕು? ಇದೇ ರೀತಿ ಇವರು ಹೇಳಿದ್ದನ್ನೆಲ್ಲಾ ನೋಡ್ತಾ, ತೋರಿಸ್ಕೊಳ್ತಾ ಹೋದ್ರೆ ಇವತ್ತಲ್ಲಾ ನಾಳೆ ನಮ್ಮನ್ನೂ ನ್ಯಾಸ್ ಕಾರ್ ಥರಾ ಮಾಡ್ ಬಿಡ್ತಾರೇನೋ ಅಂತ ಹೆದರಿಕೆ ಆಗುತ್ತೆ. ಕಷ್ಟಾ ಪಟ್ಟು ಸಂಪಾದ್ನೇ ಮಾಡಿ ಒಂದ್ ಟೀ ಶರ್ಟ್ ತೊಗೊಂಡ್ರೂ ಅದರ ಮೇಲೆ ಈ ನನ್ ಮಕ್ಳು ಲೋಗೋ ಬೇರೆ ಕೇಡಿಗೆ...ನಲವತ್ತ್ ಡಾಲರ್ ಖರ್ಚ್ ಮಾಡೀ ನನ್ ಎದೇ ಮೇಲೆ ದೊಡ್ಡದಾಗಿ Calvin...ನ್ನೋ ...Lauren ನ್ನೋ ಅಂತ ಬರಸಿಕೊಂಡು ಓಡಾಡೋಕೆ ನನಗೇನ್ ಹುಚ್ಚ್ ಹಿಡಿದಿದೇ ಅಂತ ತಿಳಕೊಂಡಿದಾರೋ ಇವರು? ಹೋಗ್ರೋಲೋ, ನಮ್ಮೂರ್ ಟೈಲರ್ರೂ ನಾನು ಹುಟ್ಟಿದಾಗ್ನಿಂದಾ ಬಟ್ಟೇ ಹೊಲಕೊಟ್ರೂ ಒಂದಿನಾ ಅವ್ನ ಹೆಸರನ್ನಾ ಕುತ್ತಿಗೆ ಹಿಂದಿನ ಕಾಲರ್ ಲೇಬಲ್ ಬಿಟ್ಟು ಮತ್ತೆಲ್ಲೂ ಹಾಕ್ಲಿಲ್ಲಾ, ಪಾಪ ಅಂತಾ ದೊಡ್ಡ ಮನುಷ್ಯನಿಗೆ ನಾನು ಒಂದ್ ಶರ್ಟ್ ಹೊಲ್ ಕೊಟ್ರೆ ಎರಡ್ ಡಾಲರ್ ಕೊಟ್ರೇ ಹೆಚ್ಚು! ಪ್ಯಾಂಟಿ‌ನ್ ಮೇಲೆ ಲೋಗೋ, ಶರಟಿನ್ ಮೇಲ್ ಲೋಗೋ, ಶೂ ಮೇಲ್ ಲೋಗೋ, ನಾವ್ ಮುಟ್ಟೋ ಎಲ್ಲದರ ಮೇಲೂ ಲೋಗೋನೇ...ಜನಿವಾರ ಒಂದ್ ಬಿಟ್ಟು ಹಾಕ್ಕೊಂಡಿರೋ ಮತ್ತೆಲ್ಲದರ ಮೇಲೂ ಒಂದೊಂದ್ ಲೋಗೋ...ಭೀಮಾ ಜ್ಯುಯೆಲರ್ಸ್ ಹತ್ರ ತೊಗೊಂಡಿರೋ ಕತ್ನಲ್ಲಿರೋ ಚಿನ್ನದ ಸರದ್ ಮೇಲೂ ಅವನಂಗಡೀಲೇ ತಗೊಂಡಿದ್ದೂ ಅಂತ ಸಣ್ಣದಾಗಿ ಏನೋ ಕೆತ್ತ್‌ಗೊಂಡಿದಾನೆ...ನೋಡಿದ್ರಾ ಎಲ್ಲೀವರೆಗೆ ಬಂದಿದೆ ಇದೂ ಅಂತ!

ಈ ನನ್ ಮಕ್ಳು ತಮ್ ತಮಿಗೆ ಬೇಕಾದ್ದು ಇನ್ಸ್ಟಾಲ್ ಮಾಡ್ಕೊಂಡ್ರಾ...ಈಗ ಒಂದೇ ಸಮನೆ ಅಳೋಕ್ ಸ್ಟಾರ್ಟ್ ಮಾಡಿದಾವೆ...Restart ಮಾಡೂ ಅಂತ. ನೀನೇ ಮಾಡ್ತೀಯೋ ಇಲ್ಲಾ ನಾವೇ ಮಾಡೋಣ್ವೋ ಅಂತ ಕೇಳಿದ್ದಕ್ಕೆ ನಾನೇ ಮಾಡ್ತೀನಿ ನನಗೆ ಬೇಕಾದಾಗ ಅಂತ ಒಂದ್ಸರ್ತಿ ಹೇಳಿದ್ರೆ ಅರ್ಥಾನೇ ಆಗಲ್ಲ ಇವುಗಳಿಗೆ...ಈ ಹದಿನೈದ್ ನಿಮಿಷದಲ್ಲಿ ಕೊನೇ ಪಕ್ಷ ಒಂದ್ ಐದು ಸರ್ತೀನಾದ್ರೂ ಪಾಪ್ ಅಪ್ ಮೆಸ್ಸೇಜ್‌ ಬಂದಿವೆ...Restart ಮಾಡೂ ಅಂತ...ಸಾಯ್ತಾರ್ ನನ್ ಮಕ್ಳು.

ನಿಮಿಗೆ ಮತ್ತೊಂದ್ ವಿಷ್ಯಾ ಹೇಳ್ಬೇಕು...ನನಗೆ ನಾನು ಯಾವ್ಯಾವ್ದೋ ದೇಶ್ದಲ್ಲಿ ಅದೆಷ್ಟೋ ಡಾಲರ್/ಯೂರೋ ಲಾಟರಿ ಗೆದ್ದಿದ್ದೀನಿ ಅಂತ ಮೆಸ್ಸೇಜ್‌ಗಳು ಬರೋಕ್ ಶುರುವಾಗಿವೆ! ಇಂಥಾ ಮೆಸ್ಸೇಜ್ ಬಂದಾಗೆಲ್ಲಾ ಒಂದೊಂದ್ ಡಾಲರ್ ನನಿಗೆ ಸಿಕ್ಕಿದ್ರೆ ಇಷ್ಟೋತ್ತಿಗೆ ಮಿಲಿಯನ್ನರ್ ಆಗ್ತಿದ್ನೋ ಏನೋ...ಎಲ್ಲಾ ಡಬ್ಬಾ ನನ್ ಮಕ್ಳೂ ಯಾವನ್ನಾದ್ರೂ ಬೇವಕೂಫನ್ನ ಬುಟ್ಟಿಗೆ ಬೀಳಿಸ್ ಕೊಂಡೂ ಏಮಾರ್ಸೋಕೋ ಕಾದಿರೋ ಹಾಗೆ ಕಾಣ್ಸುತ್ತೆ. ಇ-ಮೇಲ್ ಅನ್ನೋ ಕಮ್ಮ್ಯೂನಿಕೇಷನ್ ಮಾಧ್ಯಮವನ್ನಾ ಸ್ಪ್ಯಾಮ್ ಆಗಿ ಬಳಸಿ ಫಿಷಿಂಗ್ ಮಾಡಿ ಅಮಾಯಕರನ್ನ ಬಲೆಗೆ ಹಾಕ್ಕೊಂಡು ಬಲೀ ತೊಗೊಳೋರ್‌ನಾ ಹಿಡಿದು ಇರಾಕ್‌ನಲ್ಲಿ ತಲೆ ತೆಗೆದಂಗ್ ತೆಗೀಬೇಕು ಅಂತ ಎಷ್ಟೋ ಸರ್ತಿ ಸಿಟ್ಟೇ ಬರುತ್ತೆ.

ಈ ನನ್ ಮಕ್ಳುದ್ ಎಲ್ಲಾರ್ದೂ ಒಂದೊಂದ್ ಅಜೆಂಡಾ...ಬದುಕು ಅನ್ನೋದು ಅವರಿವರು ಹೇಳಿದಂಗೆ ಕುಣಿಯೋ ಸೂತ್ರದ ಬೊಂಬೆಯಾಗಿ ಹೋಗಿದೆ ಅನ್ನೋದಕ್ಕೆ ಇಷ್ಟು ಬರೀ ಬೇಕಾಯ್ತು...ನಮ್ ತಂತ್ರಜ್ಞಾನ ಮತ್ತೊಂದು ಎಷ್ಟೇ ಬೆಳೀಲಿ...ಗೋಡೇ ಮೇಲೆ ಏರಿದಂತೆಲ್ಲಾ ಏಣಿ ಗೋಡೆಗೇ ಹೆಚ್ಚ್ ಹೆಚ್ಚು ವಾಲಿಕೊಳ್ಳೋ ಹಾಗೆ ನಮ್ ಡಿಪೆಂಡೆನ್ಸಿ ಅವುಗಳ ಮೇಲೆಲ್ಲಾ ಜಾಸ್ತೀನೇ ಆಗುತ್ತೇ ಅನ್ಸಲ್ಲಾ? ಒಂದೊಂದ್ ಸರ್ತಿ ಇವೆಲ್ಲಾ ಬಿಟ್ಟು ಎಲ್ಲಾದ್ರೂ ಓಡ್ ಹೋಗ್ಭೇಕು ಅನ್ಸುತ್ತೆ, ಏನ್ ಮಾಡ್ಲೀ ಬೆಳಗ್ಗೆ ಒಂದು ಇಂಪಾರ್ಟೆಂಟ್ ಪ್ರೆಸೆಂಟೇಷನ್ನಿದೆ...(ಇಲ್ಲಾ ಅಂದ್ರೆ ಎಲ್ಲಾದ್ರೂ ದೇಶಾಂತ್ರ ಹೋಗ್ತಿದ್ನೋ ಇಲ್ಲ್ವೋ ಅದ್ ಬೇರೇ ವಿಷ್ಯಾ).

ಮತ್ತ್ ಶುರುವಾಯ್ತು ನೋಡಿ, Restart ಮಾಡ್ದೇ ಹೋದ್ರೆ Security compromise ಮಾಡಿದ ಹಾಗೆ ಅನ್ನೋ ಆದೇಶ...ಮಾಡ್ತೀನ್ ತಾಳಿ, ಇವ್ರುಗಳು ಹೇಳಿದ ಹಾಗೆ Restart ಯಾಕ್ ಮಾಡ್ಬೇಕು? Shutdown ಮಾಡಿ ನನಗ್ಯಾವಾಗ್ ಬೇಕೋ ಅವಾಗ್ Start ಮಾಡ್ಕೋತೀನಿ... ತಮಾಷೆ ವಿಷ್ಯಾ ಅಂದ್ರೆ Turn Off Computer ಅಂತ ಅನ್ನೋದಕ್ಕೂ Start button ಮೇಲೇ ಕ್ಲಿಕ್ ಮಾಡ್‌ಬೇಕು! ಒಂದ್ಸರ್ತಿ Turn-off ಮಾಡ್ಬೇಕು ಅನ್ನೋವಾಗ ಮತ್ತಿನ್ನೊಂದಿಷ್ಟ್ ಆಪ್ಷನ್ನುಗಳು ಯಾಕೆ ಅಂತ ಅನ್ಸಲ್ವಾ? ಈ ಮನುಷ್ಯನ್ ತಲೇ ಅನ್ನೋದು ಖತರ್‌ನಾಕ್ ಶಿವಾ...ಒಂದನೇ ಕ್ಲಾಸ್ ಮಕ್ಳಿಗೆ ಯಾವತ್ತಾದ್ರೂ ಹೇಳ್ಕೊಡಿ ಕಂಪ್ಯೂಟರ್ರ್ ಬಗ್ಗೆ ಆಗ ಗೊತ್ತಾಗುತ್ತೆ, ಇವರ ಕಮ್ಯಾಂಡ್ ಸೀಕ್ವೆನ್ಸುಗಳೆಲ್ಲಾ ಎಷ್ಟು ಇಲ್ಲಾಜಿಕಲ್ಲೂ ಅಂತ...ನಾನೇನಾದ್ರೂ ಆಪರೇಂಟಿಂಗ್ ಸಿಸ್ಟಂ ಬರೆದ್ರೆ Shutdown ಅಂತ ಒಂದು ಬಟನ್ ಬರೀತೀನಿ, ಅದನ್ನ್ ಕ್ಲಿಕ್ ಮಾಡಿದ್ರೆ shutdown ಆಗೋ ಹಾಗೆ ಮಾಡ್ತೀನಿ...as simple as that!

Wednesday, July 11, 2007

ಕಗಪ

ಎಷ್ಟೋ ಸರತಿ ಅನ್ಸಲ್ವಾ? ನಮಗೆ ಗೊತ್ತಿದ್ದೂ ಗೊತ್ತಿದ್ದೂ ಕೆಲವೊಮ್ಮೆ ನಾವು ನಮಗೆ ಗೊತ್ತಿರೋದನ್ನೇ ಮಾಡ್ತೀವೇ ವಿನಾ ಹೊಸದೇನನ್ನೂ ಪ್ರಯತ್ನಿಸೋಲ್ಲಾ ಅಂತಾ? ನಿನ್ನೆ ರಾತ್ರಿ "ಬರಹ"ದಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಕಗಪ ಕೀಲಿಮಣೆಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು ಪ್ರಯೋಗಗಳನ್ನು ಮಾಡತೊಡಗಿ ಒಮ್ಮೆ ಹೂಟಿ ಸಿಕ್ಕರೆ ಕಗಪ ಕೀಲಿಮಣೆ ಬಹಳ ಸುಲಭ, ಅದೂ ಅಲ್ಲದೆ ಕಡಿಮೆ ಕೀ ಸ್ಟ್ರೋಕ್‌ಗಳನ್ನು ಉಪಯೋಗಿಸಿ ಹೆಚ್ಚು ಬರೆಯಬಹುದು ಎನ್ನಿಸಿದ್ದು ನಿಜ.

ಆದರೆ, ನನ್ನ ಬರಹದ Transliteration (ba ra ha) ಗೂ, ಕಗಪ ದ ವೇಗಕ್ಕೂ ಬಹಳ ವ್ಯತ್ಯಾಸವಿರೋದಂತೂ ನಿಜ. ದಿನನಿತ್ಯ ಬಳಸಿದರೆ ಕಗಪವೂ ಹೆಚ್ಚು ವೇಗವನ್ನು ದೊರಕಿಸಿಕೊಡಬಹುದು ಎಂದು ನನಗೆನ್ನಿಸುವ ಹೊತ್ತಿಗೆ ತುಂಬಾ ತಡವಾಗಿದೆ ಎಂದು ನನಗೆ ಗೊತ್ತು.

’ಅಂತರಂಗ’ದ ಬರಹಗಳನ್ನು ಲೆಕ್ಕ ಹಾಕಿದರೆ ಲೇಖನಗಳು ಸರಾಸರಿ ಏಳೆಂಟು ಕಿಲೋ ಬೈಟ್‌ಗಳು ಇರಬಹುದೇನೋ, 'ಕಗಪ'ದಲ್ಲಿ ಕಡಿಮೆ ಟೈಪ್ ಮಾಡಿ ಹೆಚ್ಚು ಬರೆಯುವಂತೆ ಮಾಡುವುದು ನನ್ನಂತಹ ಸೋಮಾರಿಗಳಿಗೆ ವರದಾನವಾಗಬಲ್ಲದು.

ಈ ಲೇಖನ ಚಿಕ್ಕದಾಗಿರುವುದಕ್ಕೆ ಕಾರಣ ನಿಮಗೆ ಈಗಾಗಲೇ ಗೊತ್ತಾಗಿರಬಹುದು!

(ಬರಹ ಬ್ರಹ್ಮನಿಗೆ ಡ್ಯೂ ಕ್ರೆಡಿಟ್ ಕೊಡುತ್ತಾ...’ಅಂತರಂಗ’ದ ನಮನಗಳು)

ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (66)
ಬರಹದಲ್ಲಿ (ನಾನು ಎಣಿಸಿದ ಹಾಗೆ) ೬೬ ಕೀ ಸ್ಟ್ರೋಕ್‌ಗಳು.

ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (51)
ಮೇಲಿನ ವಾಕ್ಯ ಕಗಪದಲ್ಲಿ ಬರೆದಾಗ ೫೧ ಕೀ ಸ್ಟ್ರೋಕ್‌ಗಳು.


ವ್ಯಂಜನಗಳನ್ನು ಬರೆಯುವಾಗ Transliteration ಸ್ಕೀಮ್ ನಲ್ಲಿ "ka" ಎಂದು ಟೈಪ್ ಮಾಡಿದರೆ "ಕ" ಆಗುವುದು ಎರಡು ಕೀ ಸ್ಟ್ರೋಕ್‌ಗಳನ್ನು ಬೇಡುತ್ತದೆ, ಅದೇ ಕಗಪದಲ್ಲಿ "k" ಟೈಪ್ ಮಾಡಿದರೆ "ಕ" ಆಗುವುದಕ್ಕೆ ಕೇವಲ ಒಂದೇ ಕೀ ಸ್ಟ್ರೋಕ್ ಬೇಕಾಗುತ್ತದೆ. ಆದರೆ, ಸ್ವರಗಳನ್ನು ಬಳಸುವಲ್ಲಿ, ಹಾಗೂ ಕಾಗುಣಿತದ (ಕಿ,ಕೀ,ಕು,ಕೂ,ಕೃ,ಕೆ,ಕೇ,ಕೈ,ಕೊ,ಕೋ,ಕೌ,ಕಂ,ಕಃ) ಬಳಕೆಯಲ್ಲಿ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಇಂಗ್ಲೀಷ್ ಕೀ ಬೋರ್ಡ್‌ನ q, w, ಅಕ್ಷರಗಳನ್ನು ಟ, ಡ, ಎಂದು ಮನದಲ್ಲಿ ಆಲೋಚಿಸಿಕೊಳ್ಳಲು ನನಗೆ ಸ್ವಲ್ಪ ಸಮಯಬೇಕಾಯಿತು, ಜೊತೆಗೆ ಪ್ರತಿಯೊಂದು ಒತ್ತಕ್ಷರಕ್ಕೆ ’f' ಬಳಸುವುದು ತುಸು ಹಿಂಸೆ ಎನಿಸಿತು.


Tuesday, July 10, 2007

ನೈತಿಕ್ ಪಟೇಲ್ ಎಂಬೋ ಗ್ಯಾಸ್ ಸ್ಟೇಷನ್ ಕೆಲಸಗಾರ

ಹಿಲರಿ ಕ್ಲಿಂಟನ್ ಬೇಕಾದ್ರೆ ಗ್ಯಾಸ್ ಸ್ಟೇಷನ್ನಲ್ಲಿರೋ ಮಹಾತ್ಮ ಗಾಂಧಿಗಳು ಅಂತಾ ತಮಾಷೆ ಬೇಕಾದ್ರೆ ಮಾಡ್ಕೊಳ್ಳಿ, ನಮ್ಮೂರ್‌ನ್ನಲ್ಲಿ ಇಲ್ಲಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಓನರ್ರು, ಕೆಲಸಗಾರ್ರು ಹೆಚ್ಚು ಮಟ್ಟಿಗೆ ಭಾರತೀಯರೇ. ಒಂದು ತಿಂಗಳ ಹಿಂದೆ ನಮ್ಮನೆಗೆ ಹತ್ತಿರದಲ್ಲಿರುವ ಸ್ಟೇಷನ್ನಲ್ಲಿ ಕಾರು ನಿಲ್ಲಿಸಿದಾಗ ಸುಮಾರು ಇಪ್ಪತ್ತರ ಹರೆಯದ ಯುವಕನೊಬ್ಬ ಬಂದು ಸುಮಾರಾದ ಇಂಗ್ಲೀಷಿನಲ್ಲಿ ಗ್ಯಾಸ್ (ಗ್ಯಾಸೋಲಿನ್) ಆರ್ಡರ್ ತೆಗೆದುಕೊಂಡು ನನ್ನ ಕ್ರೆಡಿಟ್‌ಕಾರ್ಡ್ ಹಿಡಿದುಕೊಂಡು ಹೋದ. ಅಲ್ಲಿ ಗ್ಯಾಸ್ ಪಂಪ್ ಮಾಡಲು ಶುರುಮಾಡಿ ಬೇರೆ ಯಾರೂ ಗಿರಾಕಿಗಳಿಲ್ಲದ ಕಾರಣ ಸುಮ್ಮನೆ ನಿಂತಿದ್ದವನನ್ನು ನಾನೇ ಕರೆದು ಮಾತನಾಡಿಸಿದೆ. ಅವನ ಬೆರಗು ಕಂಗಳು, ಅವನು ಸುತ್ತಲನ್ನು ನೋಡುತ್ತಿದ್ದ ಕುತೂಹಲ ನನ್ನಲ್ಲೂ ಅವನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವಂತೆ ಮಾಡಿತ್ತು.

ಅವನು ಹಿಂದಿನ ದಿನವಷ್ಟೇ ಭಾರತದಿಂದ ಬಂದವನೆಂದೂ, ಇವತ್ತಾಗಲೇ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್‌ಗೆ ಅಪ್ಲೈ ಮಾಡಿದ್ದಾನೆಂದೂ ತಿಳಿಯಿತು. ಅಮೇರಿಕದ ಬಗ್ಗೆ ಏನೇನೆಲ್ಲ ತಿಳಿದುಕೊಂಡಿದ್ದೀಯೆ, ನಿನ್ನನ್ನು ಯಾರು ಕರೆದುಕೊಂಡು ಬಂದರು ಎಂದು ಕೇಳಲಾಗಿ - ನನಗೇನೂ ಗೊತ್ತಿಲ್ಲ, ನನ್ನ ಸೋದರ ಮಾವ ಕರೆದುಕೊಂಡು ಬಂದ - ಒಮ್ಮೆ ಸೋಷಿಯಲ್ಲ್ ಬಂದ ಕೂಡಲೇ ನಾನು ನನ್ನದೇ ಒಂದು ಅಂಗಡಿಯನ್ನು ತೆರೆದು ಬೇರೆಲ್ಲಾದರೂ ಹೊರಟು ಹೋಗುತ್ತೇನೆ, ಅದಕ್ಕೋಸ್ಕರ ಮಾವ ಸಹಾಯ ಮಾಡುವುದಾಗಿ ತಿಳಿಸಿದ.

'ಇಲ್ಲಿನ ಛಳಿಯ ಬಗ್ಗೆ ಕೇಳಿದ್ದೀಯೇನು?' ಎಂದು ನನ್ನ ವ್ಯಂಗ್ಯ ಮಿಶ್ರಿತ ನಗೆಚಾಟಿಕೆಗೆ ಉತ್ತರವಾಗಿ ಅವನ ಮುಗ್ಧ ನಗು ಜೊತೆಗೆ 'ನನಗೇನೂ ಗೊತ್ತಿಲ್ಲ, ಆ ದೇವ್ರು ಎಲ್ಲಿ ತೋರಿಸ್ತಾನೆ ಅಲ್ಲಿ...' ಎನ್ನುವ ಮಹದೌರ್ಯದ ಮಾತು ಬೇರೆ.

ವಾರಕ್ಕೊಮ್ಮೆ ಗ್ಯಾಸ್ ಹಾಕಿಸಲು ಹೋದಾಗಲೆಲ್ಲ ಇವನು ಹಾಕಿದ ಎಕ್ಸಾನ್ ಅವರು ಕೊಟ್ಟ ಅಂಗಿಯ ಮೇಲೆ Al ಎಂದೋ Shaw ಎಂದೋ ಮತ್ತಿನ್ನೇನಾದರೂ ಹೆಸರುಗಳಿರುತ್ತಿದ್ದವು. 'ಏನಯ್ಯಾ ಬದಲಾಗಿ ಹೋಗಿದ್ದೀಯೇ ಬಂದು ಕೆಲವೇ ದಿನಗಳಲ್ಲಿ' ಎಂದು ಚುಚ್ಚಿದರೆ, 'ನನ್ನ ಅಂಗಿ ಇನ್ನೂ ಬಂದಿಲ್ಲ, ಅದಕ್ಕೇ ಬೇರೆಯವ್ರದ್ದು ಹಾಕ್ಕೊಂಡಿದ್ದೆನೆ...' ಎಂದು ಉದ್ದವಾದ ತೋಳುಗಳನ್ನು ಮಡಚಿಕೊಂಡಿರುವುದರ ಬಗ್ಗೆ ತೋರಿಸಿ ಹೇಳುತ್ತಾನೆ.

***

ನನ್ನ ಸಹೋದ್ಯೋಗಿ ಕೆನ್ ಹೇಳ್ತಿದ್ದಾ 'ಅಲಸ್ಕಾದಲ್ಲಿ ಆಯಿಲ್ ಚೆಲ್ಲಿ ಪರಿಸರವನ್ನು ಹಾಳುಗೆಡವಿದರೆಂದು ಎಷ್ಟೋ ಜನ ಎಕ್ಸಾನ್‌ನಲ್ಲಿ ಇವತ್ತಿಗೂ ಗ್ಯಾಸ್ ಖರಿದಿಸೋದಿಲ್ಲ' ಎಂಬುದಾಗಿ. ಅವನ ಹೇಳಿಕೆ ಸುಳ್ಳೋ ನಿಜವೋ, ಸುಳ್ಳಿರಬಹುದು ಎನ್ನುವಂತೆ ಎಕ್ಸಾನ್ ಮೊಬಿಲ್ ಪ್ರಪಂಚದ ಎಲ್ಲ ಕಾರ್ಪೋರೇಷನ್ನುಗಳಲ್ಲಿನ ಲಾಭಕ್ಕಿಂತಲೂ ಹೆಚ್ಚಾಗಿ ಲಾಭದ ಮೇಲೆ ಲಾಭ ಮಾಡುತ್ತಲೇ ಬಂದಿದೆ, ಅದೂ ಇತ್ತೀಚೆಗಂತೂ ಹಲವು ದಾಖಲೆಗಳನ್ನೂ ಮೀರಿಸಿದೆ.

ನಾನು ಕಿವಿಯಲ್ಲಿ ಕೇಳುವ ಪರಿಸರ ವಾದದ ವಿವರಗಳು, ಕಣ್ಣಲ್ಲಿ ನೋಡೋ ನೋಟಕ್ಕಾಗಲೀ, ಮಾಡೋ ಕಾರ್ಯಕ್ಕಾಗಲೀ ಯಾವುದೇ ಸಂಬಂಧಗಳನ್ನು ಬೆಳೆಸಿಕೊಂಡು ಅನ್ಯೋನ್ಯವಾಗಿರದೇ ಇರೋದರಿಂದ ಹೇಳೋದೊಂದೂ ಮಾಡೋದೊಂದೂ ಅಂತಾರಲ್ಲ ಹಾಗೆ ನನ್ನ ಎಲ್ಲ ಕಾರ್ಯ ವೈಖರಿಗಳು ಅಮೇರಿಕನ್ ಮಯವಾಗಿದೆ. ಯಾವತ್ತೋ ಪರಿಸರವನ್ನು ಹಾಳುಮಾಡಿದವರು ಎನ್ನುವುದು ಎಮೋಷನಲ್ ಮಾತಾದ್ದರಿಂದ ಅದಕ್ಕೋಸ್ಕರ ಒಂದು ಮೈಲು ದೂರದಲ್ಲಿರೋ ಶೆಲ್ ಗ್ಯಾಸ್ ಸ್ಟೇಷನ್ನಿಗೆ ಹೋಗಿ ನಾನೇನು ಗ್ಯಾಸ್ ತುಂಬಿಸೋದಿಲ್ಲ. ಎಲ್ಲಿ ಬೆಲೆ ಕಡಿಮೆ ಇರುತ್ತದೋ ಅಲ್ಲಿ ಎನ್ನುವುದಕ್ಕೆ ಎರಡನೇ ಆದ್ಯತೆ, ಅದಕ್ಕಿಂತಲೂ ಮೊದಲು ಸಮಯಕ್ಕೆ ತಕ್ಕ ಹಾಗೆ ನನ್ನ ಟ್ಯಾಂಕ್ ತುಂಬಬೇಕು, ಅಷ್ಟೇ.

***

ನೈತಿಕ್ ಪಟೇಲನ ಹೊಳಪು ಕಂಗಳುಗಳು, ಅವನ ವಿಚಾರವಂತಿಕೆ ಹಾಗೂ Fresh of the boat ಎಂದು ಇಲ್ಲಿಗೆ ಬಂದಂತಹವರನ್ನು ಇಲ್ಲಿ ಹುಟ್ಟಿದ ಭಾರತೀಯರು ಕರೆಯುವ ಹಾಗಿನ ತಿಳುವಳಿಕೆ ಇವೆಲ್ಲವೂ ನನ್ನನ್ನು ಅವನ ಬಳಿ ಮಾತನಾಡುವಂತೆ ಪ್ರಚೋದಿಸುತ್ತವೆ.

ಇಂದು ಗ್ಯಾಸ್ ಹಾಕಿಸಲು ಹೋದರೆ ಬೇರೆ ಯಾರೋ ಬಂದು ಕ್ರೆಡಿಟ್ ಕಾರ್ಡ್ ಎತ್ತಿಕೊಂಡು ಹೋದರೂ, ದೂರದಲ್ಲಿದ್ದ ನೈತಿಕ್ ನನ್ನ ಕಾರನ್ನು ನೋಡಿ ತಾನೇ ಹತ್ತಿರ ಬಂದು ಮಾತನಾಡಿಸಿದ. ಇವತ್ತು ಮತ್ತೆ ಬೇರೆ ಯಾರದ್ದೋ ಹೆಸರಿನ ಅಂಗಿಯನ್ನು ಧರಿಸಿದ್ದ, ಮುಖದಲ್ಲಿ ಅದೇ ಮುಗ್ಧತೆ. ಅವನಿಗೆ ಸೋಷಿಯಲ್ (ಸೆಕ್ಯೂರಿಟಿ ಕಾರ್ಡ್) ಬಂದಿದೆ ಎಂದೂ, ಇನ್ನು ಕೆಲವೇ ದಿನಗಳಲ್ಲಿ ಅವನು ತನ್ನದೇ ಆದ ಒಂದು ಅಂಗಡಿಯನ್ನು ತೆರೆಯುತ್ತಾನೆಂದೂ ತಿಳಿಸಿದ. ಇನ್ನೂ ಎಲ್ಲಿ ಎಂಬುದು ತೀರ್ಮಾನವಾಗಿಲ್ಲ, ಹುಡುಕುತ್ತಿದ್ದೇವೆ ಆದರೆ ಅವನ ಮಾಮಾ ಎಲ್ಲದಕ್ಕೂ ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದ. ಅವನ ಕೆಲವು ವಾರಗಳ ಪ್ರಗತಿಯನ್ನು ನೋಡಿ ಬಹಳ ಸಂತೋಷವಾಯಿತು, ಜೊತೆಗೆ ಒಬ್ಬ ಸ್ನೇಹಿತನನ್ನು ಕಳೆದುಕೊಳ್ಳುತ್ತಿರುವ ದುಃಖವೂ ಆಯಿತು.

ನೈತಿಕ್ ಒಂದೆರಡು ವಾರದಲ್ಲೇ ಗ್ಯಾಸ್ ಹಾಕಿ ತೆಗೆಯುವ ಚಟುವಟಿಕೆಗಳಲ್ಲಿ ನಿಪುಣನಾಗಿದ್ದ, ಅವನ ವೇಗ ಇಮ್ಮಡಿಸಿತ್ತು. ಥರಾವರಿ ಜನಗಳ ಬಳಿ ಮಾತನಾಡಿ ಈಗಾಗಲೇ ಇಂಗ್ಲೀಷ್ ಸುಧಾರಿಸಿದಂತೆ ಕಂಡುಬಂತು, ಎಲ್ಲಕ್ಕಿಂತ ಮುಖ್ಯವಾಗಿ ಅವನ ಹೆಚ್ಚಿದ ಆತ್ಮವಿಶ್ವಾಸ ಗಮನಕ್ಕೆ ಬಂತು.

'ಏನಯ್ಯಾ, ಅಮೇರಿಕಕ್ಕೆ ಬಂದು ಇಲ್ಲಿಯವರ ಹಾಗೆಯೇ ಗ್ಲೌಸ್ ಹಾಕ್ಕೊಂಡು ಕೆಲಸ ಮಾಡ್ತಾ ಇದ್ದೀಯಾ?' ಎಂದು ರೇಗಿಸಲು ನೋಡಿದೆ, ಅದಕ್ಕವನು ಶಾಂತವಾಗಿ 'ಮೊದಮೊದಲು ಕಷ್ಟವಾಗುತ್ತಿತ್ತು, ಈಗ ಅದೇ ರೂಢಿಯಾಗಿ ಹೋಗಿದೆ, ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ವಾ?' ಎಂದು ಉತ್ತರಿಸಿದ.

ನಾನು ಗ್ಯಾಸ್ ಹಾಕಿಸಿಕೊಂಡು ಮನೆಯ ಹಾಡಿ ಹಿಡಿದೆ.

Sunday, July 08, 2007

’ಅವರೊಡನೆ’ ಒಂದು ಸಂವಾದ...

ನಮ್ಮೂರಿನ್ ಪೋಸ್ಟ್ ಮಾಸ್ಟರ್ ಆಚಾರ್ರು ತಮಿಗ್ ಬರೋ ಅಷ್ಟೊಂದ್ ಕಡಿಮೆ ಸಂಬಳದಲ್ಲಿ ಅದ್‌ಹೆಂಗ್ ಜೀವ್ನಾ ನಡೆಸ್ತಿದ್ರೋ, ಮಕ್ಳೂ-ಮರಿ ಇರೋವಂತ ದೊಡ್ಡ ಸಂಸಾರಾನೇ ಅವ್ರುದ್ದು, ಅಂತ ಎಷ್ಟೋ ಸರ್ತಿ ಯೋಚ್ನೆ ಬರುತ್ತೆ. ನಾನ್ ಕೆಲ್ಸಾ ಮಾಡೋಕ್ ಶುರು ಮಾಡ್ದಾಗ್ಲಿಂದ್ಲೂ ಒಂದಲ್ಲಾ ಒಂದ್ ರೀತಿಯಿಂದ ಸಂಬ್ಳಾ ಜಾಸ್ತಿ ಆಗ್ತಾ ಹೋಗ್ತಾ ಇರೋದು ಸಹಜವಾದಷ್ಟೇ ಕೈಗ್ ಬರೋ ಕಾಸು ಕಮ್ಮೀ ಅಂತ್ಲೇ ಅನ್ನಿಸ್ತಿರೋದೂ ಅಷ್ಟೇ ಸಹಜವಾಗಿ ಬಿಟ್ಟಿದೆ! ಈ ಆಸೆಗೊಳಿಗೊಂದ್ ಮಿತಿ ಅಂತಾ ಬ್ಯಾಡ್ವಾ ಅಂತ ಬಹಳಷ್ಟ್ ಸರ್ತಿ ಅನ್ಸಿರೋದೂ ನಿಜವೇ.

ಆ ಪೋಸ್ಟ್ ಮಾಸ್ಟರ್ರುಗಳಿಗೆ ಏನ್ ಕಡಿಮೆ ಇಲ್ಲಾ ಪ್ರತೀ ಸರ್ತಿ ಮನಿ ಆರ್ಡ್ರು ಹಂಚೋಕ್ ಹೋದಾಗ್ಲೆಲ್ಲಾ ಎರಡ್ ರೂಪಾಯ್, ಐದ್ ರೂಪಾಯ್ ಅಂತ ಜನ ಕೊಡ್ತ್ಲೇ ಇದಾರೆ, ಅವರ ಮೇಲ್ ಸಂಪಾದ್ನೇ, ಅದೇ ಗಿಂಬಳಾ ಅಂತರಲ್ಲಾ ಅದಕ್ಕ್ಯಾವಾಗ್ಲೂ ಕಮ್ಮೀ ಅಂತಿಲ್ಲ. ಬರೋ ಸಂಬ್ಳದಿಂದ ಜೀವ್ನಾ ಸಾಗ್ಸೋದ್ ಅಂದ್ರೆ ಹುಡುಗಾಟ್ವೇ, ಈಗಿನ್ ಕಾಲ್ದಲ್ಲಿ ಹಂಗ್ ಯಾವಾನಾದ್ರೂ ಮಾಡ್ತಾನೆ ಅಂತಂದ್ರೆ ಅಷ್ಟೇಯಾ, ತಿಂಗ್ಳು ಕೊನಿಗೆ ಹೊಟ್ಟೇಗ್ ತಣ್ಣೀರ್ ಬಟ್ಟೆಯೇ ಗತಿ.

ಏನ್ ಮೇಲ್ಸಂಪಾದ್ನೇ ಬಂದ್ರೂ ಅಷ್ಟೇ - ಒಬ್ ಅಂಚೆ ಇಲಾಖೆ ಕೆಲ್ಸಗಾರನಿಗೆ ಬಹಳಷ್ಟು ಕನಸುಗಳೇನಾದ್ರೂ ಇರೋಕಾಗುತ್ಯೇ? ಅವೇ - ನಮ್ ಮಕ್ಳುನ್ ಇಂಜಿನಿಯರಿಂಗೂ, ಮೆಡಿಕಲ್ಲೂ ಓದಿಸ್ಬೇಕು; ದೊಡ್ಡ ಬಂಗ್ಲೇ ಕಟ್ ಬೇಕು; ಹಾಯಾಗಿ ಇರ್‌ಬೇಕು, ಇತ್ಯಾದಿ. ಗೃಹಸ್ಥಾಶ್ರಮ ಅಂದ್ರೇನು ಅಂತ ಗೊತ್ತಾಗೋದೇ ಮನೇ ತುಂಬ ಮಕ್ಳಿರೋಂಥ ಮನೆಯ ಹಿರಿಯನಾಗಿ, ಸರ್ಕಾರಿ ಶಾಲೆ ಮೇಷ್ಟ್ರೋ ಅಥವಾ ಅಂಚೆ ಇಲಾಖೆ ನೌಕರನೋ ಆಗಿಕೊಂಡು ಮನೆ ಯಜಮಾನನಾಗಿ ಇಪ್ಪತ್ತು-ಮೂವತ್ತು ವರ್ಷ ಜೀತಾ ತೇದಿ-ತೇದಿ ಹಾಕ್ದಾಗ್ಲೇ. ಮಕ್ಳೂ-ಮರಿ ಓದಿಸೋದ್ ಹಾಗಿರ್ಲಿ, ಕಾಸಿಗ್ ಕಾಸು ಕೂಡಿ ಎರಡು ಹೆಣ್ ಮಕ್ಳು ಮದುವೆ ಮಾಡಿ ಸೈ ಅನ್ನಿಸ್ಕ್ಯಳ್ಳಿ ನೋಡಾಣಾ...ಇಂಥಾ ಒಂದ್ ಗೃಹಸ್ಥಾಶ್ರಮದಲ್ಲಿ ಬದುಕಿ ಜಯಿಸಿದಾ ಅಂತಂದ್ರೆ ಎಕ್ಸಿಕ್ಯೂಟಿವ್ ಆಗಿ ಕೈ ತುಂಬಾ ಸಂಪಾದ್ನೇ ಮಾಡೋ ಹತ್ ಹತ್ತು ಕೆಲ್ಸದ ಪುಣ್ಯ ಸಿಕ್ಕ ಹಾಗೆ...ಅದು ನೋಡ್ರ್ಯಪ್ಪಾ ನಿಜವಾದ ಸಂಸಾರ ಅಂದ್ರೆ. ಪಟ್‌ಪಟ್ಟಿ, ಸ್ಕೂಟ್ರು, ಕಾರ್‌ನ್ಯಾಗೆ ಹೋಗಿ ಚೈನಿ ಮಾಡ್‌ತಿರೋ ನಮ್ಮಂತೋರಿಗೆ ಗೊತ್ತಾಗಂಗಿಲ್ಲ. ಒಂದೋ ಎರಡೋ ಹಡಕಂಡೇ ನಮ್ ಆಕ್ರಂದನ ಮುಗಿಲು ಮುಟ್ಟೋ ಹೊತ್ತಿನೊಳಗ ಹಿಂದೆ ಹೆಂಗಪ್ಪಾ ಜನ ಸಂಸಾರ ಸಾಗಿಸ್ತಿದ್ರೂ ಅನ್ಸಂಗಿಲ್ಲಾ?

ಹಾಕ್ಯಂಡ್ ಚಪ್ಲೀ ಸೈತಾ ಸವಿಯಂಗಿಲ್ಲಾ ಇದೊಂದ್ ನಮನಿ ಕೆಲ್ಸಾ ನೋಡ್ರಿ...ಅಂಗಿ ಕಾಲರ್ ಕೊಳೀ ಆಗದಿರೋಂಥ ಹವಾಮಾನದೊಳಗೆ ಬೇಯೋ ನಮಗೆ ಅತ್ಲಾಗ್ ಹೋಗಿ ಇತ್ಲಾಗ್ ಬಂದ್ರೆ ಉಸ್ಸ್ ಅನ್ನುವಂಗ್ ಆಗ್ ಹೋಗ್ತತಿ. ಮೈ ಮುರ್ದು-ಬಗ್ಸಿ ಕೆಲ್ಸಾ ಮಾಡೋ ಹೊತ್ಯ್ನ್ಯಾಗೆ ಕೂತ್ ಕಾಲಾ ಹಾಕ್ತವಿ, ಇನ್ನು ಕೂತ್ ತಿನ್ನೋ ಹೊತ್ತಿಗೆ ತೆವಳಿ ಸಾಯ್ತೇವಿ ಅನ್ಸಂಗಿಲ್ಲಾ? ಮನ್ಷಾ ಅಂದೋನ್ ಓಡಾಡ್ ಬಕು, ಮೈ ಬಗ್ಸಿ ದುಡಿಬಕು, ಹಂಗಾದ್ರೆ ಒಂದಿಷ್ಟು ಪರಿಶ್ರಮಾನಾದ್ರೂ ಆಗ್ತತಿ, ಮೈ ಮನಸು ಗಟ್ಟೀನಾರೆ ಆಗ್ತಾವೆ, ಅದು ಬಿಟ್ಟು ಬರೀ ತಲಿ ಖರ್ಚ್ ಮಾಡಿಕೊಂಡು ಪ್ರಪಂಚದ್ ಜನಾ ಎಲ್ಲಾ ಹಿಂಗ್ ಕುಂತಾ ಕಾಲಾ ತೆಗದೂ-ತೆಗದೂ ಅದ್ ಏನ್ ಉದ್ದಾರ್ ಆಗೈತಿ ಅಂತ ನೀವಾ ಹೇಳ್ರಲ್ಲಾ.

ಅದಿರ್ಲಿ ಬಿಡ್ರಿ...ಏನ್ ಮಳೀರಿ ಈ ಸರ್ತಿ ಅವನೌವ್ನು, ಎಲ್ಲಾ ಕೆರೆ ಕಟ್ಟೇ ತುಂಬಿಕ್ಯಂಡ್ ಕೋಡೀ ಬಿದ್ದ್ ಹೋಗೋಷ್ಟೋ...ಇನ್ನೂ ನಿಂತಿಲ್ಲ ನೋಡ್ರಿ ಇದರ ಅರ್ಭಟಾ...ಗೊಂಧೀ ಹೊಳೀ ತುಂಬಿ ರಸ್ತೀ ಮ್ಯಾಗ್ ನೀರ್ ಬಂದು ಎಲ್ಲಾ ಬಸ್ನೂ ನಿಲ್ಲಿಸ್ಯಾರ್ರೀ, ಹಾನಗಲ್ಲೂ, ಹುಬ್ಬಳ್ಳಿ ಹೋಗ್‌ಬಕು ಅಂದ್ರ ತಿರುಕ್ಯಂಡ್ ಹೋಗ್‌ಬಕು. ವರದಾ ನದಿ ಇಷ್ಟು ಯಾವತ್ತೂ ತುಂಬಿ ಹರಿದಿದ್ದಾ ನನ್ ಜೀವ್‌ಮಾನ್‌ದಾಗ್ ನೋಡಿದ್ದಿಲ್ರಿ. ದೇಶಾ ಪೂರ್ತಿ ತೊಳದ್ ಹೋಗೋಷ್ಟು ಮಳೀ ಬಂದ್ರೂ ನಮ್ ದೇಶದಾಗ್ ತುಂಬಿರೋ ಕೋಳೀ ಎಲ್ಲೂ ಹೋಗೋಂಗ್ ಕಾಣ್ಸಲ್ಲ. ದೊಡ್ಡ ಮನ್ಷಾರು ತಮ್ ಪಾಡಿಗ್ ತಾವ್ ಇರ್ತಾರ, ಇತ್ಲಾಗ್ ಬಡವ್ರು ಸತ್‌ಗಂತ ಕುಂತಾರೆ, ಹೇಳೋರಿಲ್ಲ ಕೇಳೋರಿಲ್ಲ ಅನ್ನಂಗಾಗಿ ಹೋಗ್ಯದೆ. ಸಾಲಾ ಸೂಲಾ ಮಾಡೀ ಕಾಳೂ-ಕಡಿ ತಂದು ಬಿತ್ತಿ ಇನ್ನೇನು ಪೈರು ಚಿಗರ್ಕ್ಯಬಕು ಅನ್ನೋಷ್ಟರಲ್ಲಿ ಇದೊಂದ್ ಹಾಳ್ ಮಳಿ ಹೊಡಕಂತ ಕುಂತತ್ ನೋಡ್ರಿ...ಸಾಲಾ ಕೊಟ್ಟೋರ್‌ಗೇನ್ ಅನ್ನಣ, ಬಡ್ಡಿ ಹೆಂಗ್ ತೀರ್ಸಣ, ಹೆಂಡ್ರೂ-ಮಕ್ಳೂ ಮೈ ಮ್ಯಾಗ್ ಅರಿವೇ-ವಸ್ತ್ರಾನ್ ಎಲ್ಲಿಂದಾ ತರಣಾ. ಅತ್ಲಾಗ್ ಜೀವಾ ಕಳಕಂತವಿ ಅಂದ್ರೂ ಒಂದ್ ನಿಮ್ಷಾ ಮಳಿ ಬಿಡವಲ್ದು, ಮನ್ಯಾಗಾ ಬಿದ್ದು ಸಾಯ್‌ಬಕು...ಅದೂ ಅಲ್ಲೀ-ಇಲ್ಲೀ ಸೋರೀ-ಸೋರಿ ಎತ್ಲಾಗ್ ನೋಡಿದ್ರೂ ಹಸೀಹಸೀ ಮುಗ್ಗುಲು ವಾಸ್ನೆ ಹಿಡದ್‌ಬಿಟ್ಟತಿ.

***

’ಯಾರಿಗೆ ಟೀ ತರ್‌ಬೇಕು? ಇಲ್ಲಿ ಯಾರೂ ಇಲ್ಲವಲ್ಲಾ...’.

’ಏ ಇವಳೇ... ಇವರಿಗೊಂದು ಕಪ್ ಚಾ ತಂದ್ ಕೊಡು...’ ಅಂತ ಇನ್ನೇನೋ ಬಡಬಡಿಸುತ್ತಾ ಇದ್ರಿ... ಯಾವ್ದಾದ್ರೂ ಕನಸೇನಾದ್ರೂ ಬಿದ್ದಿತ್ತಾ?

Thursday, July 05, 2007

ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...

'ಕುಡಗೋಲು ನುಂಗ ಬ್ಯಾಡ್ರೋ ಅಂತ ನಾನು ಅವತ್ತೇ ಹೇಳಿರ್‌ಲಿಲ್ಲಾ... ಕೊನಿಗೆ ಅದು ಹೊರಗ ಬರಬೇಕಾದ್ರ ನಿಮದೇ ಹರಿತತಿ!' ಎಂದು ಸುಬ್ಬ ಯಾರ ಹತ್ರನೋ ಗಟ್ಟಿಯಾಗಿ ಫೋನ್‌ನಲ್ಲಿ ಮಾತನಾಡೋದನ್ನು ಕೇಳಿ According to Jim ನೋಡುತ್ತಾ ಕುಳಿತಿದ್ದ ನನ್ನ ಕಿವಿಗಳು ನೆಟ್ಟಗಾದವು, ಟಿವಿ ವಾಲ್ಯೂಮ್ ಕಡಿಮೆ ಮಾಡಿ ಫೋನ್ ಸಂಭಾಷಣೆಯತ್ತ ಕಿವಿಗೊಟ್ಟೆ, ಆ ಕಡೆಯ ಸಂಭಾಷಣೆ ಏನೂ ಕೇಳುತ್ತಿರಲಿಲ್ಲವಾದ್ದರಿಂದ ಒನ್‌ವೇ ಕಾನ್ವರ್‌ಸೇಷನ್ನ್ ಅನ್ನು ಊಹಿಸಿಕೊಂಡು ಮೊದಲ ಬಾರಿಗೆ ಸ್ನೇಹಿತರ ಒತ್ತಾಯಕ್ಕೆ ಹಿಂದಿ ಸಿನಿಮಾ ನೋಡುತ್ತಿದ್ದ ತಮಿಳಿನವನಂತಾಗಿತ್ತು ನನ್ನ ಊಹಾ ಶಕ್ತಿ.

'...'

'ಅದೂ ಇಲ್ಲಾ, ಗಿದೂ ಇಲ್ಲ, ಈಗೇನ್ ಮಾಡ್ತೀರಿ ಅನ್ನೋದ್ ನೋಡ್ರಿ, ನಿಮ್ಮ ಕರ್ಮ ನಿಮಗೆ... ನಾಯಿ ತಗೊಂಡ್ ಹೋಗಿ ಪಲ್ಲಕ್ಕಿ ಸೇರಿಸಿದ್ರೆ ಹೇಲ್ ಕಂಡಲ್ಲಿ ಹಾರಿತ್ತಂತೆ!' ಎಂದು ಮತ್ತೊಂದು ನುಡಿ ಮುತ್ತು ಹೊರಗೆ ಬಂತು - ನಮ್ ಸುಬ್ಬನೇ ಹೀಗೆ ಸಿಟ್ಟು ಬಂದಾಗೆಲ್ಲ ಅದೆಲ್ಲೆಲ್ಲಿಂದಲೋ ಹಿಡಿದುಕೊಂಡು ಬಂದ ಅಣಿಮುತ್ತುಗಳನ್ನು ಸಹಜವಾಗಿ ಉದುರಿಸುವವ.

'...'

'ನಾನ್ ಬರೋದು ಇನ್ನೂ ಯಾವ ಕಾಲಕ್ಕೋ, ಎಲ್ಲಾನೂ ನಿಮ್ ಕೈಯಲ್ಲೇ ಬಿಟ್ಟ್ ಬಂದೀದೀನಿ...ಒಂದಿಷ್ಟು ಪೋಲೀಸ್ ಗಿಲೀಸ್‍ರಿಗೆ ಲಂಚಾ ಕೊಟ್ಟಾದ್ರೂ ಕೆಲಸ ಮಾಡಿಸ್‌ಕೊಳ್ಳ್ರಿ, ಇಲ್ಲಾಂತಂದ್ರೆ ಕೊನಿಗೆ ಅದರ ಫಲಾ ನೀವೇ ಅನುಭವಿಸಬೇಕಾದೀತು, ಅವಾಗವಾಗ ಫೋನ್ ಮಾಡ್‌ತಿರ್‌ತೀನಿ...ಇಡಲಾ ಹಂಗರೆ?' ಎಂದು ಆ ಕಡೆಯ ಸ್ವರಕ್ಕೆ ಇನ್ನೊಂದು ಕ್ಷಣ ಕಿವಿ ಕೊಟ್ಟಂತೆ ಮಾಡಿ ಫೋನ್ ಇಟ್ಟು, ನನ್ನ ಕಡೆಗೆ ಒಮ್ಮೆ ನೋಡಿ, ಸೋಫಾದ ಪಕ್ಕದ ಚೇರ್ ಮೇಲೆ ಉಸ್ ಎಂದು ಶಬ್ದ ಮಾಡಿಕೊಂಡು ಆಸೀನನಾದ. ಏನಾದ್ರೂ ಹೇಳ್ತಾನೇನೋ ಅಂತ ನೋಡಿ ಒಂದು ನಿಮಿಷ ಸುಮ್ನೇ ಇದ್ದೇ, ಏನೋ ಅವಲೋಕನ ಮಾಡಿಕೊಳ್ಳೋನ ಹಾಗೆ ಮನಸ್ಸಲ್ಲಿ ಮಂಡಿಗೆ ತಿನ್ನೋರ ಹಾಗೆ ಕಂಡು ಬಂದ, ನಾನೇ ಪ್ರಶ್ನೆ ಹಾಕಿದೆ.

'ಏನಾಯ್ತು?'

'ಏನಿಲ್ಲ, ಮೈಲಾರಿ ಮಗನ ಮೇಲೆ ರೇಪ್ ಕೇಸ್ ಫೈಲ್ ಮಾಡವರಂತೆ!' ಒಂದು ಕ್ಷಣ ಸುಧಾರಿಸಿಕೊಂಡು, 'ದೇಸಾಯರ ಮಗಳ ಕೂಡೆ ಇವನ್ದೂ ಭಾಳಾ ದಿವಸದಿಂದ ನಡೆದಿತ್ತು, ಅವರಪ್ಪನ ಕೈ ಕಾಲು ಉದ್ದುದ್ದಕಿದಾವೆ, ಬ್ಯಾಡಲೇ ಅಂತ ಹೇಳಿದ್ರೂ, ಬೈಕ್ ಮ್ಯಾಲೆ ಕೂರಿಸಿಕೊಂಡು ಅದೆಲ್ಲಿಗೋ ಕರಕೊಂಡು ಹೊಂಟಿದ್ದೋನ ಹಿಡಿದು ನಾಕ್ ಮಂದಿ ಚೆನ್ನಾಗಿ ತದಕಿದ್ದೂ ಅಲ್ದೇ ಸ್ಟೇಷನ್ನಿಗೆ ಎಳಕೊಂಡ್ ಹೋಗಿ ಹೇರ್ ಬಾರ್ದಿದ್ ಕೇಸ್ ಎಲ್ಲಾ ಹೇರಿ ಎಫ್‌ಐಅರ್‍ ಫೈಲ್ ಮಾಡಿ ಕುಂತವರಂತೆ...'

'ಹುಡುಗಿ ಎಲ್ಲಿದ್ದಾಳೀಗ, ಅವಳೇನೂ ಅನ್ಲಿಲ್ಲವೇ?'

ಹುಬ್ಬುಗಳನ್ನು ತುರಿಸಿಕೊಳ್ಳುತ್ತಾ, 'ಅವಳನ್ನ ಅವರಪ್ಪ ಬಾಂಬೆಗೆ ಕರಕೊಂಡ್ ಹೋಗವನಂತೆ, ಈಗ ಅವಳ ಚಿಕ್ಕಪ್ಪನದೇ ಎಲ್ಲಾ ದರಬಾರು, ನಿಮ್ ಹುಡುಗನ್ನ ಸರಿ ಮಾಡ್ಲಿಲ್ಲಾ ಅಂತಂದ್ರೆ ನಿಮ್ ಮನೆ ಸರ್ವನಾಶ ಮಾಡ್ತೀವಿ ಅಂತ ಧಮಕಿ ಹಾಕಿ ಹೋಗವರಂತೆ ಅವರ ಕಡೆಯವರು...ಮೈಲಾರಿದೋ ಪಾಪ ಇತ್ಲಾಗ್ ಮಗನ್ನ ಬಿಡಕ್ಕಾಗಲ್ಲ, ಅತ್ಲಾಗ್ ದೇಸಾಯಿ ಕಡೆಯೋರ್ನ ಎದುರ್ ಹಾಕಿಕೊಳ್ಳಾಕ್ ಆಗಲ್ಲ ಅನ್ನೋ ಪರಿಸ್ಥಿತಿ'.

'ಪೋಲೀಸ್ ಗಿಲೀಸ್...'

ನನ್ನ ಮಾತನ್ನ ಅರ್ಧದಲ್ಲೇ ತಡೆದು, '...ಎಲ್ರೂ ದುಡ್ಡಿದ್ದೋರ್ ಕಡೆಯೇ'.

'ಮುಂದೆ...'

'ಮುಂದೂ ಇಲ್ಲಾ, ಹಿಂದೂ ಇಲ್ಲಾ...ನಾನು ಇತ್ಲಗೆ ಬರೋ ಮುಂದ ಹೇಳಿ ಬಂದಿದ್ದೆ, ಹಂಗೇ ಆತು. ಆ ಹುಡುಗ ಬದುಕಿ ಉಳ್ದಿದ್ದೇ ಹೆಚ್ಚು, ಇನ್ನೂ ಕಾಲೇಜ್ ಮೆಟ್ಲು ಹತ್ತಿ ಮುಗಿಸಿಲ್ಲಾ, ಥರಾವರಿ ಕೇಸು-ಗೀಸು ಅಂತ ಪೋಲೀಸ್ ಸ್ಟೇಷನ್ ಅಲೀಬೇಕು, ಕಾನೂನ್ ಏನೇ ಅಂದ್ರೂ ಇದ್ದೂರ್‍ನಾಗೆ ಅವರಪ್ಪಾಅಮ್ಮನಿಗೆ ಬಾಳಾ ಸುಮಾರ್ ಆಗುತ್ತೆ...'

ನಾನೆಂದೆ, 'ಆ ಹುಡುಗೀನ್ ಕರೆಸಿ ಕೇಳ್ರಿ...' ಅಂತ ಇವರು ಫಿರ್ಯಾದು ಹೊರಡಿಸ್‌ಬೇಕಪ್ಪಾ...

'ಏ ಸುಮ್ನಿರೋ, ನಿನಗ್ಗೊತ್ತಾಗಲ್ಲ...,ಮೈಲಾರಿ ಮಗನ ಮೇಲೆ ರೇಪ್ ಕೇಸ್ ಹೇರಿದಾರೆ ಅಂದ್ನಲ್ಲ, ಅದ್ರಲ್ಲಿ ಹುಡುಗೀನೇ ಇಲ್ಲ, ಅವಳ ಸ್ಟೇಟ್‌ಮೆಂಟೂ, ಡಾಕ್ಟರ್ ಎಕ್ಸಾಮಿನೇಷನ್ನೂ ಎಲ್ಲಾ ಪೇಪರ್ನಾಗೆ ಮುಗಿಸಿಬಿಟ್ಟವರೆ, ನನ್ನ ಬಲವಂತಾ ಮಾಡ್ದಾ ಅಂತ ಹುಡುಗೀನೇ ಸ್ಟೇಟ್‌ಮೆಂಟ್ ಕೊಟ್ಟಂಗೆ'.

'ಇನ್ನ್ ಉಳಿದಿರೋ ಉಪಾಯ...'

'ಉಪಾಯಾ ಏನೂ ಇಲ್ಲ, ಇವ್ರು ದೇಸಾಯರ ಕಾಲ್ ಹಿಡಿದು ಕೇಸ್ ವಾಪಾಸ್ ತೆಕ್ಕಬಕು, ಇನ್ನ್ ಇವರ ಹುಡುಗ ಅತ್ಲಾಗ್ ತಲೀ ಹಾಕಿ ಮಲಗಲ್ಲ ಅಂತ ಬರೆದುಕೊಡಬಕು, ಊರ್ ಜನ್ರ ಮುಂದ...ಅದ್ರೂ ಎಳೇ ಹುಡುಗನ್ನ ಸಮಾ ಹೊಡದವರಂತೆ, ಇನ್ನೊಂದ್ ಸ್ವಲ್ಪ ಆಗಿದ್ರೆ ಸತ್ತೇ ಹೋಗ್ತಿದ್ದ ಅನ್ನೋ ಹಾಗೆ'.

'ಮತ್ತೇ ಈ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರೆಲ್ಲಾ ವಜ್ರಮುನಿ ಹಂಗಿರೋ ದೇಸಾಯರನ್ನ ಗೆಲ್ತಾರಲ್ಲ, ಅದ್ ಹೆಂಗೆ?'

'ಅಯ್ಯೋ ಪೆಂಗೇ...ಅದ್ಕೇ ಅದನ್ನ ಸಿನಿಮಾ ಅನ್ನೋದು, ನಿಜ ಜೀವ್ನ ಅನ್ನೋದು ಬ್ಯಾರೇನೇ...ಇರೋ ನಿಜ ಜೀವ್ನಾನ ಸಿನಿಮಾ ಮಾಡಿ ತೋರಿಸ್ಲಿ, ಅಂಥದಕ್ಕೆ ರಾಷ್ಟ್ರಪ್ರಶಸ್ತಿ ಬರಬೋದೇ ವಿನಾ ಥೇಟರ್‌ನಾಗೆ ಒಂದ್ ನೊಣವೂ ಹೊಕ್ಕೋದಿಲ್ಲ...' ಈ ಸಾರಿ ಅವನ ಮಾತನ್ನ ನಾನು ಮಧ್ಯದಲ್ಲೇ ನಿಲ್ಲಿಸಿ,

'ನಿಜ ಜೀವನಕ್ಕೂ ಸಿನಿಮೀಯತೆಗೂ ಅಷ್ಟೊಂದು ವ್ಯತ್ಯಾಸ ಯಾಕಿರ್‌ಬೇಕು, ಇದ್ದದ್ದನ್ನು ಇರೋ ಹಾಗೆ ತೋರಿಸ್‌ಬೇಕಪ್ಪಾ, ನಮ್ಮಲ್ಲಿರದಿದ್ದುದನ್ನು ತೋರ್ಸಿ, ಮನುಷ್ಯರಿಗೆ ಮೀರಿದ್ದನ್ನು ಅಭಿನಯಿಸೋದನ್ನ ಮನರಂಜನೆ ಅಂಥ ಹೆಂಗ್ ಕರಿಯೋದು?'

'ನೀನ್ ತಿಳಕಂಡಂಗೆ ಜೀವ್ನಾ ಅನ್ನೋದು ಇಪ್ಪತ್ತೆರಡು ನಿಮಿಷದ According to Jim ಎಪಿಸೋಡ್ ಅಲ್ಲಾ, ಅದರ ಹಿಂದೇ ಮುಂದೇ ಬೇಕಾದಷ್ಟಿರುತ್ತೆ, ಬಾಲಿಶವಾದ ಪ್ರಶ್ನೆಗಳನ್ನು ಕೇಳೋದು ಬಿಟ್ಟು, ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...' ಎಂದು ನನ್ನ ಮನಸ್ಸಿನ್ನಲ್ಲಿ ಪುಂಖಾನುಪುಂಖವಾಗಿ ಏಳುತ್ತಿದ್ದ ಸಿನಿಮೀಯತೆಯ ಪ್ರಶ್ನೆಗಳಿಗೆಲ್ಲ ಒಂದು ಪೂರ್ಣವಿರಾಮವನ್ನಿಟ್ಟನು. ಇವನವ್ವನ... ಪ್ರಶ್ನೆಗಳೇ ಇನ್ನೂ ಅರ್ಥವಾಗಿಲ್ಲ, ಇನ್ನು ಉತ್ರ ಕಂಡ್ ಹಿಡಿಯೋದ್ ಎಲ್ಲಿಂದ ಎಂದು ಮನಸ್ಸು ಬೈದುಕೊಂಡಿತು.

Tuesday, July 03, 2007

ಜರ್ಸೀ ರಾಜ್ಯಕ್ಕೆ ಜೈ!

ಇರೋ ಐವತ್ತು ರಾಜ್ಯದೊಳಗೆ ಹೋಗೀ-ಹೋಗೀ ಈ ಜರ್ಸೀ ರಾಜ್ಯದೊಳಗೇ ಬಂದು ತಗೊಲಿಕೊಳ್ಳಬೇಕಾದ್ದಂಥದ್ದೇನಿತ್ತು? ಎಂದು ಎಷ್ಟೋ ಸಾರಿ ಯೋಚನೆ ಮಾಡಿಕೊಂಡ್ರೂ ಹೊಳೆಯದ ವಿಚಾರ - ನನ್ನ ಯಾವ ಜನ್ಮದ ಕರ್ಮ ಫಲವೋ ಎನ್ನುವಂತೆ ಈ ಜರ್ಸಿ ರಾಜ್ಯದ ನೀರು ಕುಡಿತಾ ಇದ್ದಿದ್ದಾಯ್ತು ಹೆಚ್ಚೂ ಕಡಿಮೆ ಒಂದು ದಶಕ.

ಹೆಚ್ಚೂ ಕಡಿಮೇ ಏನು ಬರೋಬ್ಬರಿ ಹತ್ತು ವರ್ಷವೇ ಕಳೆದು ಹೋಯ್ತು...ನಾಳೆಗೆ. ಇವತ್ತು ಗಾರ್ಡನ್ ಸ್ಟೇಟ್ ಪಾರ್ಕ್‌ವೇ ಎಕ್ಸಿಟ್ 138 ಪಕ್ಕದಲ್ಲಿ ಹೋಗುವಾಗ ದಿಢೀರನೆ ನೆನಪಾಯ್ತು. ನಾನು 1997 ರ ಜುಲೈ ನಾಲ್ಕರಂದು ಡೆನ್ವರ್, ಕೊಲೋರ್ಯಾಡೋನಿಂದ ಇಲ್ಲಿಗೆ ಟಿಕೇಟ್ ತೆಗೆದು ನೆವರ್ಕ್ ಲಿಬರ್ಟಿಯಲ್ಲಿ ಇಳಿದು ನಮ್ಮ ರಿಕ್ರ್ಯೂಟರ್ ಹೇಳಿದ್ದನೆಂದ್ ಕೆನಿಲ್‌ವರ್ತ್ ಇನ್ನ್‌ಗೆ ರೂಮ್ ಬುಕ್ ಮಾಡಿಕೊಂಡು ಇನ್ನೂ ಕೈಯಲ್ಲಿ ಕೆಲಸವಿಲ್ಲದಿದ್ದರೂ ಹಳೆಯ (ಭಾರತೀಯ) ಕಂಪನಿಗೆ ರಾತ್ರೋ ರಾತ್ರಿ ನಮಸ್ಕಾರ ಹೊಡೆದು (ಅದೂ ಅಂತಿಮ ನಮಸ್ಕಾರ), ಜರ್ಸೀ ರಾಜ್ಯಕ್ಕೆ ಬಂದು ಸೇರಿಕೊಂಡಿದ್ದು.

ಜುಲೈ ನಾಲ್ಕರಂದು ಕಾಂಟಿನೆಂಟಲ್ ಏರ್‌ಲ್ಲೈನ್‌ನಲ್ಲಿ ಡಿಸ್ಕೌಂಟ್ ಕೊಡುತ್ತಾರೆ ಎಂದು ಗೊತ್ತಿರಲಿಲ್ಲ, ಇನ್ನೇನು ಡೆನ್ವರ್‌ನಿಂದ ಜರ್ಸಿಗೆ ಆರು ನೂರು ಚಿಲ್ಲರೆ ಡಾಲರ್ ಕೊಡಬೇಕು ಎನ್ನುವಷ್ಟರಲ್ಲಿ -- are there any independence day special...? ಎಂದು ಪ್ರಶ್ನೆ ಹಾಕಿದೆ ಎನ್ನುವ ಒಂದೇ ಕಾರಣಕ್ಕೆ ಕೌಂಟರ್ ಹಿಂದಿದ್ದ ಲಲನಾಮಣೀ ಒಂದೇ ನಿಮಿಷದಲ್ಲಿ ನನ್ನ ಒನ್ ವೇ ಟಿಕೇಟ್ ಮೇಲೆ ಐನೂರು ಡಾಲರ್ ಡಿಸ್ಕೌಂಟ್ ಕೊಟ್ಟಿದ್ದಳು...ಕೆಳ ತಿಂಗಳ ಸಹವಾಸದಲ್ಲಿ ನಾನು ಡೆನ್ವರ್ ನಗರವನ್ನು ಅದೆಷ್ಟೇ ಮೆಚ್ಚಿಕೊಂಡಿದ್ದರೂ ಜರ್ಸಿಗೆ ಬರುತ್ತೇನೆ ಎನ್ನುವ ಹುರುಪಿನ ಮುಂದೆ ಆ ಮೆಚ್ಚುಗೆ ಭಾರತದ ಹಳೇ ಸ್ನೇಹಿತರ ಗೆಳೆತನದಂತೆ ನಿಧಾನವಾಗಿ ಕರಗಿ ಕೊನೆಗೆ ಮಾಯವಾದುದರಲ್ಲಿ ಹೊಸತೇನೂ ಇಲ್ಲ ಬಿಡಿ. ಹಾಗೂ ವರ್ಜೀನಿಯಾದಲ್ಲಿ ಕಳೆದ ಮೂರೂವರೆ ವರ್ಷಗಳು ಹಳ್ಳಿ ಹುಡುಗ ಹೈ ಸ್ಕೂಲಿಗೆ ಪಕ್ಕದ ಊರಿಗೆ ಹೋಗಿ ಬಂದ ಅನುಭವ ಅಷ್ಟೇ.

***

ಹತ್ತು ವರ್ಷ ಕಳೆದು ಹೋಗಿದೆಯೇ? ಏನೇನಾಗಿಲ್ಲ, ಏನೇನಾಗಿದೆ! ೧೯೯೭ ರ ಜುಲೈ ನಾಲ್ಕರಂದು ಬಿಟ್ಟ ಕಣ್ಣು ಮುಚ್ಚದ ಹಾಗೆ ಕೆನಿಲ್‌ವರ್ಥ್ ಇ‌ನ್‌ನ ಮಾಳಿಗೆಯಿಂದ ನೋಡಿದೆ ಫೈರ್ ವರ್ಕ್ಸ್‌ಗಳನ್ನು ಇನ್ನುಳಿದ ಯಾವ ವರ್ಷದಲ್ಲೂ ಅಷ್ಟು ಆಸಕ್ತಿಯಿಂದ ನೋಡಿಲ್ಲ. ಅಮೇರಿಕದಲ್ಲಿ ದುಡಿಯುವ ಎಲ್ಲರಿಗೂ ಆಗೋ ಹಾಗೆ ನನಗೂ ಒಂದಿಷ್ಟು ಕಾರ್ಡುಗಳು, ಸಾಲಗಳು ತಲೆ ಸುತ್ತಿಕೊಂಡಿವೆ. ಇಲ್ಲಿನ ರೀತಿ-ನೀತಿಗಳನ್ನು ಕಲಿತೆನೋ ಬಿಟ್ಟೆನೋ ಎಂದು ನನಗೆ ಆಗಾಗ ಅನುಮಾನವಾಗುತ್ತಿರುತ್ತದೆ. ಆಗಿನ ಹುರುಪು, ಭಂಡ ಧೈರ್ಯಗಳು ಈಗಿಲ್ಲವಾದರೂ ಇತ್ತೀಚಿನ ಜಾಗತಿಕ ವಿದ್ಯಮಾನಗಳನ್ನು ಕುರಿತು ಆಲೋಚಿಸಿದರೆ ಒಮ್ಮೊಮ್ಮೆ ಇಲ್ಲಿರುವುದೇ ಸೇಫ್ ಅಲ್ಲ ಅನ್ನಿಸೋದೂ ಇದೆ.

***

ಅಮೇರಿಕದ ಉಳಿದ ರಾಜ್ಯಗಳಲ್ಲಿ ದೇಸಿಗಳು ಹೆಚ್ಚೋ ಕಡಿಮೆಯೋ ಯಾರು ಬಲ್ಲರು, ನಮ್ಮ ಜರ್ಸೀ ರಾಜ್ಯದಲ್ಲಿ ಬೇಕಾದಷ್ಟು ಜನ ದೇಸಿಗಳಿದ್ದಾರೆ...ಎಲ್ಲಿ ಹೋದರಲ್ಲಿ ನಮ್ಮವರನ್ನು ನೋಡುವುದು ನಮಗೆ ಸಹಜ, ಅದು ಒಂದು ರೀತಿಯಲ್ಲಿ ನಮ್ಮನ್ನು ಇಲ್ಲಿ ಜನಪ್ರಿಯ ಮಾಡಿದೆ. ಏನಿಲ್ಲವೆಂದರೂ ಡೆನ್ವರ್‌ನಲ್ಲಿ ಕೇಳುತ್ತಿದ್ದ ಹಾಗೆ ’ಭಾರತ ಎಲ್ಲಿದೆ?’ ಎಂದು ಇಲ್ಲಿ ಯಾರೂ ಈವರೆಗೆ ಕೇಳಿದ್ದಿಲ್ಲ. ಜರ್ಸೀ ರಾಜ್ಯ ಹೆಸರಿಗೆ ಮಾತ್ರ ಸಣ್ಣ ರಾಜ್ಯಗಳಲ್ಲೊಂದು (ಭೂ ವಿಸ್ತಾರದಲ್ಲಿ), ಆದರೆ ಇಲ್ಲಿ ಜನಗಳು ಅಲೆದಾಡುವಷ್ಟು, ಇಲ್ಲಿನ ಜನಸಾಂದ್ರತೆ ಬಹಳಷ್ಟು ರಾಜ್ಯಗಳಲ್ಲಿರಲಾರದು.

***

’Happy 4th of July!...' ಎಂದು ನಾನು ಈ ವರ್ಷ ಹೇಳಿದಷ್ಟು ಬೇರೆ ಯಾವ ವರ್ಷವೂ ಹೇಳಿಲ್ಲ, ಅಮೇರಿಕತನ ನನ್ನಲ್ಲಿ ನಿಧಾನವಾಗಿ ಒಳಗಿಳಿತಿದೆಯೋ ಏನೋ!

***

ಹತ್ತು ವರ್ಷಗಳ ನಂತರವೂ ಅದೇ ಕೆನಿಲ್‌ವರ್ಥ್, ಅದೇ ಜುಲೈ ಫೋರ್ಥ್...ಇನ್ನೂ ಹತ್ತು ವರ್ಷ ಜರ್ಸೀ ರಾಜ್ಯದಲ್ಲಿ ಕಾಲ ಹಾಕದಿದ್ದರೆ ಸಾಕು...ನೀರಿನ ಋಣ ಅಂದ್ರೆ ಸಾಮ್ಯಾನ್ಯವೇನು?